ಗದಗ: ‘ಹಿಂದಿ ಸಂಪರ್ಕ ಭಾಷೆಯಾಗಿದ್ದು, ಪರೀಕ್ಷೆಗಳಾದ ಯುಪಿಎಸ್ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಹಿಂದಿ ರಾಜ್ಯ ಭಾಷಾ ಸಂಘಟನೆಯನ್ನು ಬಲಿಷ್ಠಗೊಳಿಸಲು ಶಿಕ್ಷಕರು ಒಗ್ಗೂಡಬೇಕು’ ಎಂದು ಗದಗ ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಲ್. ಬಿಜಾಪುರ ಹೇಳಿದರು.
ನಗರದ ಪ್ರತಿಷ್ಠಿತ ಮಹಾವೀರ ಜೈನ್ ಪ್ರೌಢಶಾಲೆಯಲ್ಲಿ ನಡೆದ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಜಿಲ್ಲಾ ಘಟಕದಿಂದ ಜಿಲ್ಲಾಮಟ್ಟದ ಹಿಂದಿ ಭಾಷಾ ಶಿಕ್ಷಕರ ಸಮಾಲೋಚನಾ ಸಭೆ, ರಾಜ್ಯಮಟ್ಟದ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಹಾಗೂ ಹಿಂದಿ ಶಿಕ್ಷಕ ಸೇವಾ ನಿವೃತ್ತಿ ಪಡೆದ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಎಫ್. ಪೂಜಾರ ಮಾತನಾಡಿ, ‘ಹಿಂದಿ ಭಾಷೆ ಕಲಿಕೆಗೆ ಸೀಮಿತವಾಗದೆ ಉನ್ನತ ಉದ್ಯೋಗ ಪಡೆಯಲು ಅನುಕೂಲವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ತೃತೀಯ ಭಾಷೆ ಎಲ್ಲರಿಗೂ ಅವಶ್ಯಕತೆ ಇದ್ದು ಸರ್ಕಾರ ತೃತೀಯ ಭಾಷಾ ನೀತಿಯನ್ನು ಮುಂದುವರಿಸಬೇಕು’ ಎಂದರು.
ರಾಜ್ಯ ಪ್ರತಿನಿಧಿ ಯು.ಎಸ್. ನಿಪ್ಪಾಣಿಕರ ಮಾತನಾಡಿ, ತೃತೀಯ ಭಾಷೆಗೆ ಎದುರಾಗಿರುವ ಸಮಸ್ಯೆಗಳನ್ನು ಅರಿತುಕೊಂಡ ಎಚ್ಚೆತ್ತುಕೊಳ್ಳುವುದರ ಮೂಲಕ ಹಿಂದಿ ಭಾಷಾ ಶಿಕ್ಷಕರು ಪರಿಣಾಮಕಾರಿಯಾಗಿ ಬೋಧನೆ ಮಾಡಿ ಹಿಂದಿ ಭಾಷೆಯನ್ನು ಬೆಳೆಸಲು ಮುಂದಾಗಬೇಕು’ ಎಂದರು.
ಎಸ್ಎಸ್ಎಲ್ಸಿ ಪರೀಕ್ಷಾ ನೊಡಲ್ ಅಧಿಕಾರಿ ಎಚ್.ಬಿ. ರಡ್ಡೆರ, ಗದಗ ತಾಲ್ಲೂಕು ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರವಿರಾಜ ಪವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಮತ್ತು ಪ್ರಸ್ತುತ ವರ್ಷ ಹಿಂದಿ ಶಿಕ್ಷಕ ಸೇವಾ ನಿವೃತ್ತಿ ಪಡೆದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಆರ್.ಡಿ. ಪವಾರ, ಶಿಕ್ಷಕರಾದ ಧನಸಿಂಗ್ ರಾಠೋಡ, ಕೆ.ಪಿ. ರಾಠೋಡ, ಎಂ.ಬಿ. ಕಿತ್ತೂರ, ಜಯಶ್ರೀ ಜೋಶಿ, ವಾಸುದೇವ ಕಲಾಲ, ಎಸ್.ಎಸ್. ಪಾಟೀಲ, ರಾಧಾ ಜಾಲರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.