ADVERTISEMENT

ಶಿರಹಟ್ಟಿ: ಮುಂಗಾರಿನ ಮೊದಲ ಹಬ್ಬ ಕಾರ ಹುಣ್ಣಿಮೆ ಇಂದು

ಎತ್ತುಗಳನ್ನು ಅಲಂಕಾರ ಮಾಡಿ ಖುಷಿಪಡುವ ರೈತರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 4:43 IST
Last Updated 11 ಜೂನ್ 2025, 4:43 IST
ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳಿಗೆ ಬಣ್ಣ ಬಳಿಯುತ್ತಿರುವ ಯುವ ರೈತರು.
ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳಿಗೆ ಬಣ್ಣ ಬಳಿಯುತ್ತಿರುವ ಯುವ ರೈತರು.   

ಶಿರಹಟ್ಟಿ: ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆ, ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ಬಂದ ಕನ್ನಡದ ಮೊದಲ ಮಣ್ಣಿನ ಹಬ್ಬವಾಗಿದೆ. ರೈತರು ರಾಸುಗಳಿಗೆ ಔಷಧಿ ಗುಣಗಳುಳ್ಳ ಘೊಟ್ಟಿ ಕುಡಿಸಿ, ಬಣ್ಣ ಬಳಿದು ಅಲಂಕಾರ ಮಾಡಿ ಓಡಿಸಿ ಖುಷಿ ಪಡುವ ಹಬ್ಬವಾಗಿದೆ.

ರೈತನೊಂದಿಗೆ ದುಡಿಯುವ ಎತ್ತುಗಳಿಗೆ ಪೂಜೆ ಸಲ್ಲಿಸುವ ಸಂಭ್ರಮದ ಹಬ್ಬ ಕಾರ ಹುಣ್ಣಿಮೆ. ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಪ್ರತಿಯೊಂದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎತ್ತುಗಳನ್ನು ಅಲಂಕಾರ ಮಾಡಿ ಖುಷಿಪಡುವ ರೈತರಿಗೆ ಹುಣ್ಣಿಮೆಯಲ್ಲಿ ಪ್ರವೇಶ ಮಾಡುವ ಮೃಗಶಿರ ಮಳೆ ರೈತರ ಹೊಲಗಳನ್ನು ಉತ್ತು-ಬಿತ್ತು ಚಟುವಟಿಕೆಗೆ ಹಸಿರು ನಿಶಾನೆ ನೀಡುತ್ತದೆ. 

ಮೂರು ದಿನಗಳ ಹಬ್ಬ:
ಹುಣ್ಣಿಮೆಯ ಹಿಂದಿನ ದಿನ ‘ಹೊನ್ನುಗ್ಗಿ’ ಹಬ್ಬ ಆಚರಿಸಲಾಗುತ್ತದೆ. ಅಂದಿನ ದಿನ ರೈತರ ಮನೆಯಲ್ಲಿನ ರೈತಾಪಿ ಸಾಮಗ್ರಿಗಳನ್ನು ಕ್ಯಾವಿಯಿಂದ ಸಾರಿಸಿ ಅಲಂಕರಿಸಿ ಪೂಜಿಸುವ ವಾಡಿಕೆಯುಂಟು. ಒಟ್ಟಾರೆಯಾಗಿ ಇದು ಹಬ್ಬದ ತಯಾರಿಯ ದಿನ. ಈ ದಿನ ಎತ್ತುಗಳಿಗೆ ಹೊಸ ಹಗ್ಗ, ಕೊಳಕಣ್ಣಿ (ಕೊರಳಿಗೆ ಕಟ್ಟುವ ಹಗ್ಗ), ಮೂಗುದಾಣ (ಎತ್ತುಗಳ ಹತೋಟಿಗೆ ಮೂಗಿನ ಮೂಲಕ ಹಾಕುವ ಹಗ್ಗ), ಬಾಸಿಂಗ, ಗಾಜುಮಕಡಿ (ಹಣೆಗೆ ಕಟ್ಟುವ ಹೂವಿನ ಇಲ್ಲವೇ ಬಣ್ಣದ ಹಾಳೆಯ ಮಾಲೆ), ಕೋಡಿಗೆ ಕಟ್ಟಲು ಬಣ್ಣದ ಬಟ್ಟೆ ಇಲ್ಲವೇ ರಿಬ್ಬನ್‌ ಕಟ್ಟಿ, ಎತ್ತಿನ ಮೈಮೇಲೆ ವಿಧ ವಿಧದ ಬಣ್ಣ ಬಳಿದು ತಯಾರಿ ಮಾಡಿಕೊಳ್ಳುತ್ತಾರೆ.

ADVERTISEMENT

ಪೌರಾಣಿಕ ಕತೆಯೂ ಇದೆ:

ಹಿಂದೆ ಸಮುದ್ರ ಮಂಥನದ ಸಮಯದಲ್ಲಿ ಸುರ ಅಸುರರು ಅಮೃತಕ್ಕಾಗಿ ಶ್ರಮಿಸುವ ಸಂದರ್ಭದಲ್ಲಿ ರಾಕ್ಷಸಿಯೊಬ್ಬಳೂ ಇಡೀ ವಿಶ್ವಕ್ಕೆ ಕಾಟ ಕೊಡುತ್ತಿದ್ದಳಂತೆ. ಆಗ ಜಗದೀಶ್ವರನು ತನ್ನ ಮಗ ನಂದಿಗೆ ಅವಳನ್ನು ಸಂಹರಿಸುವಂತೆ ಆಜ್ಞೆಯನ್ನು ಮಾಡಿದನಂತೆ. ಆಗ ನಂದಿಯು ತನ್ನ ಕೊಂಬಿನಿಂದ ಚುಚ್ಚಿ ಆಕೆಯ ಕರಳನ್ನು ತನ್ನ ಕೊಂಬಿಗೆ ಹಾಕಿಕೊಂಡು ರಕ್ಕಸಳನ್ನು ಸಂಹರಿಸಿ ಜನರಿಗೆ ನೆಮ್ಮದಿ ನೀಡಿದನಂತೆ. ನಂದಿಯ ಆ ವಿಜಯದ ಸಂಕೇತವಾಗಿ ನಂದಿಗಳನ್ನು ಸಿಂಗರಿಸಿ ಪೂಜಿಸಲಾಗುತ್ತದೆ. ಅಲ್ಲದೇ ಕರಳಿನ ಸಂಕೇತವಾಗಿ ಎತ್ತುಗಳ ಕೊಂಬಿಗೆ ಕೊಡುಬಳಿ ಮಾಡಿ ಹಾಕುವ ಪ್ರತೀತಿ ಇದೆ.

ವಿಶೇಷ ಪೂಜೆ:
ಜೇಷ್ಠಮಾಸದ ಹುಣ್ಣಿಮೆಯ ಅನುರಾಧ ನಕ್ಷತ್ರದ ದಿನ ಈ ಹಬ್ಬಕ್ಕಾಗಿ ಎತ್ತುಗಳನ್ನು ಮೈತೊಳೆದು, ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ರೈತರು ಮನೆಯ ದೇವರ ಕೋಣೆಯಲ್ಲಿ ರತ್ನ ಗಂಬಳಿಯ ಗದ್ದುಗೆ ಮೇಲೆ ಅಕ್ಕಿ ಅಥವಾ ಜೋಳದ ಸಾಸಿವೆಗಳ ಹಿಡಿಯಷ್ಟು ಗುಂಪು ಹಾಕಿದ ಮೇಲೆ ಅದರಲ್ಲಿ ಪೂರ್ವಾಭಿಮುಖವಾಗಿ ಜೋಡಿ ಎತ್ತುಗಳನ್ನು ನಿಲ್ಲಿಸುತ್ತಾರೆ. ಹೀಗೆ ನಿಲ್ಲಿಸಿದ ಎತ್ತುಗಳಿಗೆ ಮುತ್ತೈದೆಯರು ಪೂಜೆ ಸಲ್ಲಿಸಿ, ಹಬ್ಬಕ್ಕಾಗಿಯೇ ಹೋಳಿಗೆ, ಜೋಳದ ಕಿಚಡಿ, ಮಜ್ಜಿಗೆ ಸೇರಿದಂತೆ ಇತ್ಯಾದಿ ವಿಶೇಷ ಖಾದ್ಯಗಳನ್ನು ಎಡೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಎತ್ತುಗಳ ಮಾಲೀಕರು ಮುತ್ತೈದೆಯರಿಗೆ ಉಡಿ ತುಂಬಿ ಕೃತಜ್ಞತೆ ಸಲ್ಲಿಸುತ್ತಾರೆ. ಈ ಸಂಪ್ರದಾಯವನ್ನು ಉತ್ತರ ಕರ್ನಾಟಕದಲ್ಲಿ ಇಂದಿಗೂ ಕಾಣಬಹುದು. ಅದರಲ್ಲೂ ಶಿರಹಟ್ಟಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಆಚರಿಸುವುದು ವಿಶೇಷವಾಗಿದೆ.

ಎತ್ತಿನ ಮೂಲಕ ಭವಿಷ್ಯ

ಹಬ್ಬದ ದಿನ ಸಂಜೆ ಊರ ಅಗಸಿಯಲ್ಲಿ ಊರವರೆಲ್ಲ ಸೇರಿರುತ್ತಾರೆ. ಎರಡೂ ಕಡೆ ಅಗಸಿಗಳಲ್ಲಿ ಉದ್ದನೆಯ ಬೊಂಬುಗಳಿಗೆ ಬೇವಿನೆಲೆಗಳನ್ನು ಕಟ್ಟಿ ಆಚೆ ಈಚೆ ಹಿಡಿದು ನಿಂತಿರುತ್ತಾರೆ. ಸಿಂಗರಿಸಿದ ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಓಡಿಸುತ್ತಾರೆ. ಯಾವ ಎತ್ತು ತನ್ನ ಕೊಂಬಿನ ಸಹಾಯದಿಂದ ಆ ಬೇವಿನೆಲೆಗಳನ್ನು ಕಟ್ಟಿದ ಹಗ್ಗವನ್ನು ತಿವಿದು ಹರಿಯುತ್ತದೆಯೋ ಅಥವಾ ಮೊದಲು ಅದನ್ನು ದಾಟುತ್ತದೆಯೋ ಅ ಎತ್ತು ವಿಜಯಶಾಲಿ. ಆಗ ಯಾವ ಬಣ್ಣದ ಎತ್ತು (ಅಂದರೆ ಬಿಳಿ ಎತ್ತು ಕರಿ ಎತ್ತು ಕಂದು ಬಣ್ಣದ ಎತ್ತು) ಹಗ್ಗವನ್ನು ಹರಿಯುತ್ತದೆಯೋ ಅದರ ಆಧಾರದ ಮೇಲೆ ಆ ವರ್ಷದ ಬೆಳೆ ಮತ್ತು ಮಳೆಗಳನ್ನು ನಿರ್ಧರಿಸುತ್ತಾರೆ. ಎತ್ತುಗಳು ಓಡುವಾಗ ಅವುಗಳ ಹೆಜ್ಜೆಗಳು ಮಳೆ ಬೆಳೆಯ ಹೇಳಿಕೆಯಾಗುತ್ತವೆ. ಕಾಲು ಹಿಂದೆ ಇಡೋದು ಕಾಲು ಸಿಕ್ಕಿಸಿಕೊಳ್ಳುವುದು ಮಾಡಿದ್ರೆ ಮುಂಗಾರು ಮಳೆ ಕೈ ಕೊಟ್ಟಿತು ಹಿಂಗಾರು ಬರುತ್ತದೆ ಎಂದು; ಸರಾಗವಾಗಿ ಓಡಿತು ಅಂದ್ರ ಹಿಂಗಾರು- ಮುಂಗಾರು ಎರಡೂ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಇದನ್ನು ‘ಕರಿ ಹರಿಯುವ’ ಪದ್ಧತಿ ಎಂದು ಕರೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.