ADVERTISEMENT

ಚೂರಿ ಇರಿತದಿಂದ ಯುವಕ ಸಾವು, ನಾಲ್ವರ ಬಂಧನ– ನರಗುಂದಕ್ಕೆ ಐಜಿಪಿ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 10:44 IST
Last Updated 18 ಜನವರಿ 2022, 10:44 IST

ನರಗುಂದ (ಗದಗ ಜಿಲ್ಲೆ): ಪಟ್ಟಣದಲ್ಲಿ ಹಲವು ದಿನಗಳಿಂದ ಎರಡು ಸಮುದಾಯಗಳ ಮಧ್ಯೆ ನಡೆಯುತ್ತಿದ್ದ ಜಗಳಕ್ಕೆ ಯುವಕನೊಬ್ಬ ಬಲಿಯಾಗಿದ್ದಾರೆ.

ಸೋಮವಾರ ರಾತ್ರಿ ಒಂದು ಕೋಮಿನ ಯುವಕರು, ಇಬ್ಬರು ಯುವಕರಿಗೆ ಚೂರಿ ಇರಿದ ಘಟನೆ ಇಲ್ಲಿನ ಲೂದಿಗಲ್ಲಿ ಸಮೀಪದ ಪುರಸಭೆ ಎದುರು ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗಾಯಗೊಂಡ ಯುವಕರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಕರೆದೊಯ್ಯಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶಮೀರ್ ಶಹಪೂರ್ (19) ಮೃತಪಟ್ಟಿದ್ದಾರೆ. ಶಂಶೀರ್ ಪಠಾಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಘಟನೆಗೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡಿದ್ದಾರೆ.

‘ಹಳೆ ವೈಷಮ್ಯದ ಕಾರಣದಿಂದಾಗಿ ಚೂರಿ ಇರಿತದ ಘಟನೆ ನಡೆದಿದೆ. ಈ ಸಂಬಂಧ ನಾಲ್ಕು ಜನರನ್ನು ಬಂಧಿಸಲಾಗಿದೆ. ಪಟ್ಟಣದಲ್ಲಿ ಶಾಂತಿ ಕಾಪಾಡಲು ಬಿಗಿ ಬಂದೋಬಸ್ತ್ ಹಾಕಲಾಗಿದೆ’ ಎಂದು ಎಸ್‌ಪಿ ಶಿವಪ್ರಕಾಶ್‌ ದೇವರಾಜು ‘ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ನರಗುಂದ ಪೊಲೀಸ್ ಠಾಣೆಗೆ ಸೋಮವಾರ ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ್ ಭೇಟಿ ನೀಡಿ ಘಟನೆಯ ವಿವರ ಪಡೆದರು. ಎಸ್‌ಪಿ ದೇವರಾಜ್, ಡಿವೈಎಸ್‌ಪಿ ಶಂಕರ.ರಾಗಿ, ಸಿಪಿಐ ನಂದೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.