ಗದಗ: ‘ಕೋವಿಡ್–19 ಲಸಿಕೆ ಕೊರತೆಗೆ ಕೇಂದ್ರ ಸರ್ಕಾರವೇ ನೇರ ಕಾರಣ’ ಎಂದು ಶಾಸಕ ಎಚ್.ಕೆ.ಪಾಟೀಲ ಆರೋಪ ಮಾಡಿದರು.
ಗದುಗಿನಲ್ಲಿಶನಿವಾರಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಕೇಂದ್ರ ಸರ್ಕಾರ ಲಸಿಕೆ ಉತ್ಪಾದನೆಗೆ ಎರಡು ಕಂಪನಿಗಳಿಗೆ ಮಾತ್ರ ಅವಕಾಶ ನೀಡಿದ್ದು ತಪ್ಪು ನಿರ್ಧಾರ. ಜತೆಗೆ ಆರಂಭದಲ್ಲಿ ಉತ್ಪಾದಿಸಿದ 6 ಕೋಟಿ ಲಸಿಕೆಗಳನ್ನು ವಿದೇಶಕ್ಕೆ ಕಳುಹಿಸಿದ್ದು ದೇಶವಾಸಿಗಳಿಗೆ ಮಾಡಿದ ದ್ರೋಹ. ಪ್ರಧಾನಿ ಮೋದಿ ಅವರು ಆಮದು ಮಾಡಿಕೊಂಡಾದರೂ ದೇಶದ ಜನತೆಗೆ ಲಸಿಕೆ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಗದುಗಿನಂತಹ ಪುಟ್ಟ ಜಿಲ್ಲೆಯಲ್ಲೇ ದಿನವೊಂದರ ಲೆಕ್ಕದಲ್ಲಿ ಲಕ್ಷ ಜನರಿಗೆ ಲಸಿಕೆ ಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಾರಕ್ಕೆ 10 ಸಾವಿರದಂತೆ 2 ಸಾರಿ ಬಂದರೆ ಉದ್ದೇಶ ಈಡೇರುವುದಿಲ್ಲ. ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೂ ಬರಬೇಕು’ ಎಂದು ಹೇಳಿದರು.
‘ಕಪ್ಪು ಶಿಲೀಂಧ್ರಕ್ಕೆ ರೋಗಕ್ಕೆ ತುತ್ತಾದವರಿಗೆ ಬೇಕಾದ ಔಷಧಿಗಳನ್ನು ಒದಗಿಸಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಬೇಕು’ ಎಂದು ಆಗ್ರಹಿಸಿದರು.
ಚರ್ಚೆ ಬೇಡ; ಎಚ್ಕೆಪಿ ಸಲಹೆ
‘ಕೆಆರ್ಎಸ್ ಅಣೆಕಟ್ಟು ಬಿರುಕು ಬಿಟ್ಟಿದ್ದರೆ ಅಣೆಕಟ್ಟು ಸುರಕ್ಷಾ ಮತ್ತು ನಿರ್ವಹಣಾ ಸಮಿತಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿ. ಅದು ಬಿಟ್ಟು ಈ ವಿಚಾರವಾಗಿ ರಾಜಕೀಯ ಚರ್ಚೆ ಬೇಡ’ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಎಚ್.ಕೆ.ಪಾಟೀಲ ಸಲಹೆ ಹೇಳಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದೆ ಸುಮಲತಾ ಅಂಬರೀಷ್ ಹಾಗೂ ಅಂಬರೀಷ್ ಅಭಿಮಾನಿಗಳ ಮಧ್ಯೆ ನಡೆಯುತ್ತಿರುವ ಮಾತಿನ ಸಮರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಕಾಂಗ್ರೆಸ್ ಮುಖಂಡರಾದ ಅಶೋಕ ಮಂದಾಲಿ, ಉಮರ್ ಫಾರೂಕ ಹುಬ್ಬಳ್ಳಿ, ಬಸವರಾಜ ಕಡೇಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.