ಹೊಳೆಆಲೂರು: ಜಮ್ಮು ಮತ್ತು ಕಾಶ್ಮೀರದ ಉರಿ ಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮರಾಠ ಲೈಟ್ ಇನ್ಫೆಂಟ್ರಿಯ ಯೋಧ ವೀರೇಶ ಕುರಹಟ್ಟಿ ಅವರ ಅಂತ್ಯಕ್ರಿಯೆ ಶನಿವಾರ ಸ್ವಗ್ರಾಮ ಕರಮುಡಿಯಲ್ಲಿ ಶೋಕ ಸಾಗರದ ನಡುವೆ, ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಕುಟುಂಬ ಸದಸ್ಯರು, ಸ್ನೇಹಿತರು, ಸುತ್ತಮುತ್ತಲ ಗ್ರಾಮಗಳ ಅಸಂಖ್ಯ ಗ್ರಾಮಸ್ಥರು ಭಾಗವಹಿಸಿ, ಯೋಧನ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದಿರು.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಶುಕ್ರವಾರ ಸಂಜೆ ಪ್ರಾರ್ಥಿವ ಶರೀರವನ್ನು ಪುಣೆಗೆ ತರಲಾಗಿತ್ತು. ಅಲ್ಲಿಂದ ಶನಿವಾರ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತರಲಾಯಿತು. ಅಲ್ಲಿನ ಸೇನಾ ಕಚೇರಿಯಲ್ಲಿ ಗೌರವ ಸಲ್ಲಿಸಿದ ಬಳಿಕ, ಅಲಂಕೃತ ಸೇನಾ ವಾಹನದಲ್ಲಿ ನರಗುಂದ ಮಾರ್ಗವಾಗಿ ಕರಮುಡಿ ಗ್ರಾಮಕ್ಕೆ ತರಲಾಯಿತು.
ಮೆಣಸಗಿ, ಅಸೂಟಿ, ಗುಳಗುಂದಿ ಸೇರಿದಂತೆ ಯೋಧನ ಪ್ರಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವ ಮಾರ್ಗದಲ್ಲಿ ನೂರಾರು ಗ್ರಾಮಸ್ಥರು,ಶಾಲಾ, ಕಾಲೇಜು ವಿದ್ಯಾರ್ಥಿಗಳು, ಹಿರಿಯರು, ಯುವಕರು, ಮಹಿಳೆಯರು ರಸ್ತೆಯಂಚಿನಲ್ಲಿ ನಿಂತು ಗೌರವ ಸಲ್ಲಿಸಿದರು. ವೀರ ಯೋಧ ವೀರೇಶ ಅಮರ್ ರಹೇ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಗದಗ ಜಿಲ್ಲೆಯ ಗಡಿ ಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ಅವರು, ಪ್ರಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಬರಮಾಡಿಕೊಂಡರು.ಸೇನಾ ವಾಹನ ಯೋಧನ ಹುಟ್ಟೂರು ಪ್ರವೇಶಿಸುತ್ತಿದ್ದಂತೆ ದೇಶಪ್ರೇಮದ ಘೋಷಣೆಗಳು ಮುಗಿಲು ಮುಟ್ಟಿದವು.
ಗ್ರಾಮದಲ್ಲಿ ನೆರದಿದ್ದ ಸಾವಿರಾರು ಜನರು ಮೃತದೇಹವನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿ, ಯೋಧನ ಮನೆಯಲ್ಲಿ ಅಂತಿಮ ವಿಧಾನಗಳನ್ನು ಪೂರೈಸಿದ ನಂತರ, ಗ್ರಾಮದ ಹನುಮಂತ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ನಂತರ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಕಲ ಸರ್ಕಾರಿ, ಸೇನಾ ಗೌರವಗಳೊಂದಿಗೆ, ಸಾರ್ವಜನಿಕರ ಜಯಘೋಷಗಳ ನಡುವೆ ಅಂತ್ಯಕ್ರಿಯೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.