ನರಗುಂದ: ಕಲುಷಿತ ನೀರು ಸೇವನೆಯಿಂದ ಪಟ್ಟಣದ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ದಂಡಾಪೂರ, ದೇಸಾಯಿಭಾವಿ ಓಣಿ, ಅರ್ಭಾಣ ಓಣಿಯ ನಳಗಳಿಗೆ ಕಲುಷಿತ ನೀರು ಪೂರೈಕೆಯಾಗಿದ್ದು, ಇದನ್ನು ಕುಡಿದ ಜನರು ವಾಂತಿ, ಭೇದಿಯಿಂದ ಬಳಲಿದರು. ತೀವ್ರವಾಗಿ ಅಸ್ವಸ್ಥಗೊಂಡ ರೋಗಿಗಳನ್ನು ದಾಖಲಿಸಿಕೊಂಡು ಚಕಿತ್ಸೆ ನೀಡಲಾಗುತ್ತಿದೆ, ಇನ್ನುಳಿದವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದರು.
ಕುಡಿಯುವ ನೀರು ಪೂರೈಸುವ ಪೈಪ್ಗಳು ಅಲ್ಲಲ್ಲಿ ಒಡೆದಿದ್ದು, ಕಲುಷಿತ ನೀರು ಮಿಶ್ರಣವಾಗುತ್ತಿದೆ. ಕೆಲವೊಮ್ಮೆ ಚರಂಡಿ ನೀರು, ಕುಡಿಯುವ ನೀರಿನ ಜತೆಗೆ ಮಿಶ್ರಣಗೊಳ್ಳುತ್ತದೆ ಎಂದು ಸಾರ್ವಜನಿಕರು ದೂರಿದರು.
ಸೋಮವಾರ ತಹಶೀಲ್ದಾರ್ ಆಶಪ್ಪ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಪುರಸಭೆ ಸಿಬ್ಬಂದಿ ಕರೆಯಿಸಿ, ಕಲುಷಿತ ನೀರು ಪೂರೈಕೆ ಬಗ್ಗೆ ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.