ಲಕ್ಷ್ಮೇಶ್ವರ: ‘ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳಲ್ಲಿನ ಕಸ ಸಾಗಣೆ ವಾಹನ ಚಾಲನೆಗೆ ಮಹಿಳೆಯರು ಸಾರಥ್ಯ ವಹಿಸಿದ್ದು ಬಹುತೇಕ ಪಂಚಾಯಿತಿಗಳಿಗೆ ಮಹಿಳೆಯರೆ ಚಾಲಕಿಯರಾಗಿರುತ್ತಾರೆ’ ಎಂದು ತಾಲ್ಲೂಕು ನೋಡಲ್ ಅಧಿಕಾರಿ ಎಂ.ವಿ.ಚಳಗೇರಿ ಹೇಳಿದರು.
ಸಮೀಪದ ಅಡರಕಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ಸಾಗಾಣೆ ವಾಹನಗಳಿಗೆ ಗುರುವಾರ ಮಹಿಳಾ ಚಾಲಕಿಗೆ ವಾಹನದ ಕೀಲಿ ನೀಡುವ ಮೂಲಕ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ 8 ಗ್ರಾಮದ ಕಸ ಸಾಗಾಣಿಕೆ ವಾಹನವನ್ನು ಮಹಿಳೆಯರು ಚಲಾಯಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ. ಗ್ರಾಮದ ಪ್ರತಿ ಮನೆಯಿಂದ ಒಣ ಕಸ ಸಂಗ್ರಹ ಮಾಡಿ ಕಸ ವಿಲೇವಾರಿ ಘಟಕಕ್ಕೆ ಸಾಗಾಣಿಕೆ ಮಾಡುವ ಕಾರ್ಯ ಮಾಡಿ ಗ್ರಾಮದ ಸ್ವಚ್ಛತೆಗೆ ಶ್ರಮಿಸಬೇಕಿದೆ’ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಕೃಷ್ಣಪ್ಪ ಧರ್ಮರ ಮಾತನಾಡಿ, ‘ಗ್ರಾಮೀಣ ಭಾಗದ ಜನರು ಕಸವನ್ನು ಎಲ್ಲೆಂದರಲ್ಲಿ ಚೆಲ್ಲಿ ಪರಿಸರ ಹಾಳು ಮಾಡುವ ಬದಲು ಕಸ ವಿಲೇವಾರಿ ವಾಹನ ನಿಮ್ಮ ಬಾಗಿಲಿಗೆ ಬರುತ್ತದೆ. ಅಂತಹ ವಾಹನಗಳಿಗೆ ಕಸ ಹಾಕಬೇಕು. ಕಸ ಸಾಗಿಸುವ ವಾಹನವನ್ನು ಮಹಿಳೆಯರು ಚಲಾಯಿಸುತ್ತಿರುವುದು ಶ್ಲಾಘನೀಯ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಕ್ಕ ಲಮಾಣಿ, ಉಪಾಧ್ಯಕ್ಷೆ ಕಾಶವ್ವ ದೊಡ್ಡಮನಿ, ನಿಂಗಪ್ಪ ಪ್ಯಾಟಿ, ಗಣೇಶ ನಾಯ್ಕ, ಸೋಮಣ್ಣ ಹವಳದ, ಕಮಲವ್ವ ಲಮಾಣಿ, ಹರೀಶ್ ಲಮಾಣಿ, ಪಿಡಿಒ ಸವಿತಾ ಸೋಮಣ್ಣನವರ, ಕಾರ್ಯದರ್ಶಿ ಎಸ್.ಕೆ.ಡಂಬಳ, ಕಸವಿಲೇವಾರಿ ವಾಹನದ ಚಾಲಕಿ ಮಂಜುಳಾ ಹರಿಜನ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.