ADVERTISEMENT

ಮಹಿಳಾ ನೌಕರರ ಸಂಘದ ಸಂಘಟನೆಗಾಗಿ ರಾಜ್ಯದೆಲ್ಲೆಡೆ ಸದಸ್ಯತ್ವ ಅಭಿಯಾನ: ರೋಶನಿ ಗೌಡ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:08 IST
Last Updated 3 ಫೆಬ್ರುವರಿ 2026, 6:08 IST
ರೋಶನಿ ಗೌಡ
ರೋಶನಿ ಗೌಡ   

ಗದಗ: ‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರನ್ನು ಸಂಘಟಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಬೀದರ್‌ನಿಂದ ಚಾಮರಾಜ ನಗರದವರೆಗೆ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷೆ ರೋಶನಿ ಗೌಡ ಹೇಳಿದರು.

‘ಈವರೆಗೆ 20 ಜಿಲ್ಲೆಗಳನ್ನು ಸಂಪರ್ಕಿಸಿ, ಸಂಘಟನೆ ಮಾಡಲಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ 52ರಷ್ಟು ಮಂದಿ ಮಹಿಳಾ ನೌಕರರು ಇದ್ದು, ಈವರೆಗೆ 50 ಸಾವಿರ ಮಂದಿ ಮಹಿಳಾ ನೌಕರರು ಸದಸ್ಯತ್ವ ಪಡೆದುಕೊಂಡಿದ್ದಾರೆ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿ’ ಗ್ರೂಪ್‌ನಿಂದ ‘ಎ’ ಗ್ರೂಪ್‌ ಮಹಿಳಾ ನೌಕರರನ್ನು ಸಂಘಟಿಸಿ ಅವರನ್ನು ಒಂದೇ ವೇದಿಕೆಗೆ ತರುವ ಗುರಿ ಹೊಂದಲಾಗಿದೆ. ಈ ಮೂಲಕ ಬಲಿಷ್ಠ ಸಂಘಟನೆ ಕಟ್ಟಲು ಉದ್ದೇಶಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳನ್ನು ಆರಂಭಿಸುವ ಉದ್ದೇಶವಿದೆ’ ಎಂದು ತಿಳಿಸಿದರು.

ADVERTISEMENT

‘ಸಂಘ ಆರಂಭಗೊಂಡು ಎರಡು ವರ್ಷಗಳನ್ನು ಪೂರೈಸಿದೆ. ಇಷ್ಟು ಕಡಿಮೆ ಸಮಯದಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಂಘದ ವತಿಯಿಂದ ಮಹಿಳಾ ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮ, ಕಾನೂನು ಅರಿವು, ಕುಟುಂಬ– ನೌಕರಿ ಒತ್ತಡ ನಿರ್ವಹಣೆ ಹೇಗೆ? ಎಂಬುದರ ಕುರಿತಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು’ ಎಂದು ತಿಳಿಸಿದರು.

‘ಮಹಿಳಾ ನೌಕರರ ಕುಂದು ಕೊರತೆಗಳಿಗೆ ಸ್ಪಂದಿಸುವುದು, ಮಹಿಳೆಯರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಉಚಿತ ಆರೋಗ್ಯ ತಪಾಸಣೆ, ನೇತ್ರ ಚಿಕಿತ್ಸೆ ಮತ್ತು ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು, ಉತ್ತಮ ಮಹಿಳಾ ನೌಕರ ವರ್ಗದವರನ್ನು ಗುರುತಿಸಿ, ಅವರಿಗೆ ಪ್ರಶಸ್ತಿ, ಮಹಿಳಾ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶಿಷ್ಯವೇತನ, ಉನ್ನತ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಧನಸಹಾಯ ಸೇರಿ ವಿವಿಧ ಯೋಜನೆಗಳನ್ನು ಸಂಘ ಹಮ್ಮಿಕೊಂಡಿದೆ’ ಎಂದು ತಿಳಿಸಿದರು. 

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಎನ್.ಪಿ.ತಳಗೇರಿ, ರೇಣುಕಾ ಸಿಂಗಾಡಿ, ಎಂ.ಎಸ್.ತಳವಾರ, ಎಸ್.ಬಿ. ಹೊಸಮನಿ, ಜಯಶ್ರೀ ಕುಲಕರ್ಣಿ, ಎಂ.ವಿ.ಸ್ವಾಮಿಯವರ, ಕವಿತಾ ಎಚ್., ಮಂಜುಳಾ ತೊಂಡಿಹಾಳ, ರತ್ನಕುಮಾರಿ ಸಿಂಗಾಡಿ ಇದ್ದರು.

ಎಲ್ಲ ಇಲಾಖೆಗಳ ಮಹಿಳಾ ನೌಕರರು ಮಹಿಳಾ ನೌಕರರ ಸಂಘಕ್ಕೆ ಸೇರುವ ಮೂಲಕ ಸಂಘವನ್ನು ಬಲಿಷ್ಠಗೊಳಿಸಬೇಕು. ಮಹಿಳಾ ನೌಕರರ ಧ್ವನಿಯಾಗಿ ಕೆಲಸ ಮಾಡಲು ಸಂಘ ಸದಾ ಬದ್ಧವಾಗಿರಲಿದೆ
ರೋಶನಿಗೌಡ ಸಂಘದ ರಾಜ್ಯ ಘಟಕದ ಅಧ್ಯಕ್ಷೆ

ಋತುಚಕ್ರ ರಜೆ ಘೋಷಣೆಯಲ್ಲಿ ಸಂಘದ ನಿರ್ಣಾಯಕ ಪಾತ್ರ: ರೋಶನಿ

‘ರಾಜ್ಯ ಸರ್ಕಾರ ಋತುಚಕ್ರ ರಜೆ ಘೋಷಣೆ ಮಾಡುವಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ನಿರ್ಣಾಯಕ ಪಾತ್ರ ವಹಿಸಿತ್ತು’ ಎಂದು ರಾಜ್ಯ ಘಟಕದ ಅಧ್ಯಕ್ಷೆ ರೋಶನಿ ಗೌಡ ತಿಳಿಸಿದರು. ಈ ಹಿನ್ನೆಲೆಯಲ್ಲಿ ಸಿಎಂ ಡಿಸಿಎಂ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಡಿ.4ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿದ್ದೆವು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ನೌಕರರ ಹಿತಕಾಯಲು ನೆರವಾಗುವಂತ ವಿವಿಧ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ‘ಸರ್ಕಾರಿ ಮಹಿಳಾ ನೌಕರರ ದಿನಾಚರಣೆಯನ್ನು ಸೆ.13ರಂದು ಆಚರಿಸಬೇಕು ಎಂಬ ಸಂಘದ ಮನವಿಗೆ ಸರ್ಕಾರ ಸ್ಪಂದಿಸಿದೆ. ಅದೇರೀತಿ ಎಂಟನೇ ವೇತನ ಆಯೋಗ ರಚನೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿ ಒಂದು ವರ್ಷದವರೆಗೆ ಮಾತೃತ್ವರಜೆ ವಿಸ್ತರಣೆ ಗರ್ಭಿಣಿ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಮಹಿಳಾ ನೌಕರರಿಗೆ ದೌರ್ಜನ್ಯ ಆದಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ಕಾನೂನು ರೂಪಿಸುವಂತೆ ಬೇಡಿಕೆ ಇಟ್ಟಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.