ADVERTISEMENT

ಆಸ್ತಿ ದಾಖಲೆ ಸರಿಯಾಗಿಟ್ಟುಕೊಳ್ಳಿ: ಶಾಸಕ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 6:06 IST
Last Updated 26 ಡಿಸೆಂಬರ್ 2012, 6:06 IST

ಹಾಸನ:`ಸರ್ಕಾರಿ ಸೌಲಭ್ಯಗಳು ರೈತರಿಗೆ ಲಭಿಸಬೇಕಾದರೆ ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳುವುದು ಅಗತ್ಯ. ರೈತರು ಯಾವುದೇ ಸಮಸ್ಯೆ ಉದ್ಭವಿಸದಂತೆ  ಕಾನೂನುಬದ್ದವಾಗಿ ಆಸ್ತಿಗೆ ಸಂಬಂದಿಸಿದ ದಾಖಲೆಗಳನ್ನು ಸರಿಪಡಿಸಿಟ್ಟುಕೊಳ್ಳಬೇಕು' ಎಂದು ಶಾಸಕ ಹೆಚ್.ಎಸ್.ಪ್ರಕಾಶ್ ಸಲಹೆ ನೀಡಿದರು.

ಸಾಲಗಾಮೆ ನಾಡಕಚೇರಿಯಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

`ಗ್ರಾಮದ ಜನರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ  ನಿಗದಿತ ಸಮಯದೊಳಗೆ ಯಾವುದೇ ಪ್ರಮಾಣ ಪತ್ರ ಪಡೆಯಬಹುದು. ತಹಶೀಲ್ದಾರರು ತಿಂಗಳಿಗೆ ಒಮ್ಮೆಯಾದರೂ ನಾಡಕಚೇರಿಗೆ ಭೇಟಿ ನೀಡಿ ಸವಲತ್ತುಗಳು ಸರಿಯಾಗಿ ಜನರಿಗೆ ದೊರೆಯುತ್ತಿವೆಯೇ ಎಂಬುದನ್ನು ಪರಿಶೀಲಿಸುತ್ತಿರಬೇಕು' ಎಂದರು.

ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಕೃಷ್ಣ, `ಈವರೆಗೂ ರೈತರು ಯಾವುದೇ ದಾಖಲಾತಿ ಪಡೆಯಬೇಕಾದರೆ ದಿನಗಟ್ಟಲೆ ತಾಲ್ಲೂಕು ಕೇಂದ್ರಕ್ಕೆ ಅಲೆದಾಡಬೇಕಾಗುತ್ತಿತ್ತು. ಇನ್ನು ಹೋಬಳಿ ಕೇಂದ್ರದ ನಾಡಕಚೆರಿಯಲ್ಲೇ ದಾಖಲಾತಿಗಳು ಲಭ್ಯವಾಗಲಿವೆ. ಈ ವ್ಯವಸ್ಥೆಯಿಂದ ಜನರಿಗೆ ಅನುಕೂಲವಾಗಲಿದೆ' ಎಂದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್, ನಗರ ಸಭೆ ಅಧ್ಯಕ್ಷ ಸಿ.ಆರ್.ಶಂಕರ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಸತ್ಯಕುಮಾರ್ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಸ್.ಕೆ. ಕುಮಾರಸ್ವಾಮಿ, ಅಪರ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ಪ್ರೊಬೆಷನರಿ ಉಪ ವಿಭಾಗಾಧಿಕಾರಿ ಪ್ರಕಾಶ್ ರಜಪುತ್ ಮುಂತಾದವರು ಉಪಸ್ಥಿತರಿದ್ದರು. ಉಪ ವಿಭಾಗಾಧಿಕಾರಿ ಕೆ.ಜೆ.ಜಗದೀಶ್ ಸ್ವಾಗತಿಸಿದರು. ತಹಸೀಲ್ದಾರ್ ಮಂಜುನಾಥ್ ವಂದಿಸಿದರು, ಶಿರಸ್ತೆದಾರ್ ನಟೇಶ್ ನಿರೂಪಿಸಿದರು.

ದುದ್ದದಲ್ಲಿ ಕಚೇರಿ ಆರಂಭ
`ಹೋಬಳಿ ಮಟ್ಟದಲ್ಲಿ ನಾಡ ಕಚೇರಿಗಳನ್ನು ಆರಂಭಿಸಿರುವುದರಿಂದ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ತಮಗೆ ಬೇಕಾದ ಅಗತ್ಯ ದಾಖಲಾತಿಗಳನ್ನು ಶೀಘ್ರವಾಗಿ ಪಡೆಯಲು ಅನುಕೂಲವಾಗಲಿದೆ' ಎಂದು ಜಿ.ಪಂ. ಸದಸ್ಯ ಲಕ್ಷ್ಮಣ್‌ಗೌಡ ನುಡಿದರು.

ತಾಲ್ಲೂಕಿನ ದುದ್ದ ಹೋಬಳಿಯಲ್ಲಿ ಮಂಗಳವಾರ ನೂತನ ನಾಡ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ನೆಮ್ಮದಿ ಕೇಂದ್ರಗಳಲ್ಲಿ ಆಗುತ್ತಿದ್ದ ವಿಳಂಬ ನೀತಿ ಈ ಕಚೇರಿಗಳಲ್ಲೂ ಆಗದಂತೆ ಕಂದಾಯ ಇಲಾಖೆಯ ನೌಕರರು ನೋಡಿಕೊಳ್ಳಬೇಕು. ನಾಡ ಕಚೇರಿಗೆ ಅವಶ್ಯಕವಾಗಿ ಬೇಕಾಗಿರುವ ಕಂಪ್ಯೂಟರ್ ಉಪಕರಣ ಮತ್ತು ಇಂಟರ್‌ನೆಟ್ ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವ ಮೂಲಕ ರೈತರಿಗೆ ಬೇಕಾಗಿರುವ ದಾಖಲಾತಿಗಳನ್ನು ನಿಗದಿತ ಸಮಯದಲ್ಲಿ ನೀಡಬೇಕು' ಎಂದರು. ದುದ್ದ ಗ್ರಾ.ಪಂ. ಅಧ್ಯಕ್ಷ ಪಿ. ದಿನೇಶ್, ರೈತ ಸಂಘದ ಅಧ್ಯಕ್ಷ ಡಿ.ಕೆ. ನಿಂಗೇಗೌಡ, ಗ್ರಾಮ ಲೆಕ್ಕಿಗರಾದ ಯಶೋಧರ, ಮಧು, ಕುಮಾರಸ್ವಾಮಿ, ಗೋವಿಂದರಾಜು, ಬೀರೇಗೌಡ, ರಜನಿಕಾಂತ್, ವೀರಪ್ಪ, ಜಯರಾಂ, ಹರೀಶ್ ಮತ್ತಿತರರು ಹಾಜರಿದ್ದರು. ರಾಮಣ್ಣ ಸ್ವಾಗತಿಸಿದರು ಆರ್. ಮಲ್ಲೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.