ADVERTISEMENT

ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 8:20 IST
Last Updated 3 ಸೆಪ್ಟೆಂಬರ್ 2011, 8:20 IST

ಬೇಲೂರು: ಹಲವು ವರ್ಷಗಳ ಹಿಂದೆಯೇ ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪ ತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರೂ ಇಲ್ಲಿಯವರೆಗೆ ಯಾವುದೇ ಸವಲತ್ತು, ಸೌಲಭ್ಯ ನೀಡಿಲ್ಲ. ಆಸ್ಪತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯಲು ಶುಕ್ರವಾರ ನಡೆದ ಸಾಮಾನ್ಯ ಆರೋಗ್ಯ ರಕ್ಷ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ವೈ.ಎನ್.ರುದ್ರೇಶ್‌ಗೌಡ ಬೇಲೂರು ಆಸ್ಪತ್ರೆಯನ್ನು 100 ಹಾಸಿಗೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಯಾವುದೇ ಸವಲತ್ತು ನೀಡಿಲ್ಲ. ಆಸ್ಪತ್ರೆ ಯಲ್ಲಿ 6 ವೈದ್ಯರು ಮಾತ್ರ ಇದ್ದಾರೆ. ಕಟ್ಟಡದ ಸಮಸ್ಯೆಯಿದೆ. ಈ ಹಿನ್ನೆಲೆಯಲ್ಲಿ 100 ಹಾಸಿಗೆಗೆ ನೀಡುವ ಎಲ್ಲ ಸವಲತ್ತನ್ನು ಸರ್ಕಾರ ಕೂಡಲೇ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದರು.

ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದೆ ಇರುವ ಔಷಧಿಗಳಿಗೆ ಸಂಜೆ 4.30ರ ನಂತರ ಹೊರಗಿನಿಂದ ತರಲು ಚೀಟಿ ಬರೆದು ಕೊಡಬೇಕು. ಅದು ಬಿಟ್ಟು ಆಸ್ಪತ್ರೆಯಲ್ಲಿರುವ ಔಷಧಿಗಳಿಗೆ ಚೀಟಿ ಬರೆದು ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕು ಆರೋಗ್ಯಾಧಿಕಾರಿ, ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಪಿಜಿಶಿಯನ್ ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದು ತಮ್ಮ ಗಮನಕ್ಕೆ ಬಂದಿದ್ದು, ಪಿಜಿಶಿಯನ್ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಸೂಚಿಸಲಾಗುವುದು ಎಂದರು.

ರಕ್ತನಿಧಿ ಕಟ್ಟಡ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಬಳಿಕ ರಕ್ತನಿಧಿ ಕೇಂದ್ರವನ್ನು ತೆರೆಯಲಾಗುವುದು. ಜಿಪಂನಿಂದ ರೂ.3 ಲಕ್ಷ ಉಪಕರಣ ಖರೀದಿಗೆ ನೀಡಲಾಗುತ್ತಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ತಿಳಿಸಿದರು.

ಜಿ.ಪಂ. ಸದಸ್ಯರಾದ ಅಮಿತ್‌ಕುಮಾರ್ ಶೆಟ್ಟಿ, ಬಿ.ಜಯಶೀಲ, ಜಿ.ಟಿ.ಇಂದಿರಾ, ತಾಪಂ ಉಪಾಧ್ಯಕ್ಷ ಜೆ.ಸಿ.ಮೋಹನ್‌ಕುಮಾರ್, ರಕ್ಷಾ ಸಮಿತಿ ಸದಸ್ಯರಾದ ಡಾ.ಇ.ಪಿ.ವಾಸಪ್ಪ, ಅಲೀಂ, ಸತ್ಯನಾರಾಯಣ, ವಿಜಯಕೇಶವ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂದ್ಯಾ, ವೈದ್ಯಾಧಿಕಾರಿ ಡಾ.ಶ್ಯಾಮಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.