ADVERTISEMENT

ಕಾಡಾನೆ ಹಿಂಡು ದಾಳಿ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:54 IST
Last Updated 18 ಸೆಪ್ಟೆಂಬರ್ 2013, 6:54 IST

ಆಲೂರು: ಕಾಡಾನೆಗಳ ಹಿಂಡು ತೋಟ, ಗದ್ದೆಗಳ ಮೇಲೆ ದಾಂಧಲೆ ನಡೆಸಿ ಲಕ್ಷಾಂತರ ರೂಪಾಯಿ ಹಾನಿ ಮಾಡಿರುವ ಘಟನೆ ತಾಲ್ಲೂಕಿನ ಕೆ.ಹೊಸ­ಕೋಟೆ ಹೋಬಳಿಯ ಗ್ರಾಮಗಳಲ್ಲಿ ನಡೆದಿದೆ.

ಸೋಮವಾರ ರಾತ್ರಿ ಹೋಬಳಿ ವ್ಯಾಪ್ತಿಯ ಹರೀಹಳ್ಳಿ, ಹಾಡ್ಯ ಕೊಪ್ಪಲು ಹಾಗೂ ಕಾಗನೂರು ಗ್ರಾಮಗಳಿಗೆ ನುಗ್ಗಿದ 14ಆನೆಗಳ ಹಿಂಡು ಹರೀಹಳ್ಳಿ ಗ್ರಾಮದ ನರೇಂದ್ರ ಅವರ ವಾಸದ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಇದ್ದ ಪ್ಲಾಸ್ಟಿಕ್‌ ಡ್ರಮ್‌ ಮತ್ತು ಭತ್ತದ ಬೆಳೆ, ಹಾಡ್ಯಕೊಪ್ಪಲು ಗ್ರಾಮದ ವೆಂಕಟೇಶ್‌, ಬೆಂಬಳೂರು ಗ್ರಾಮದ ಹರೀಶ್‌ ಮತ್ತು ಕಾಗನೂರು ಗ್ರಾಮದ ಪುಟ್ಟಸ್ವಾಮಿಗೌಡ, ನಾಗಾವಾರ ಗ್ರಾಮದ ರಮೇಶ್‌ ಇವರುಗಳಿಗೆ ಸೇರಿದ ಗದ್ದೆಯಲ್ಲಿ ಬೆಳೆದ ಭತ್ತ, ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ಬಾಳೆ, ತೆಂಗು ಸೇರಿದಂತೆ ಲಕ್ಷಾಂತರ ರೂಗಳ ಬೆಳೆ ನಷ್ಟ ಮಾಡಿವೆ.

‘ತಾಲ್ಲೂಕಿನ ಕುಂದೂರು ಮತ್ತು ಕೆ.ಹೊಸಕೋಟೆ ಹೋಬಳಿಗಳ ಅರಣ್ಯ ಪ್ರದೇಶಗಳಲ್ಲಿ 46 ಆನೆಗಳು ಹಗಲು–ರಾತ್ರ ಎನ್ನದೇ ದಾಂಧಲೆ ನಡೆಸಿ ನಾಶ ಮಾಡಿದ್ದು, ಈ ಬಾರಿ ಮತ್ತೇ ಬೆಳೆ ಬೆಳೆಯುವುದು ಅಸಾಧ್ಯ’ ಎಂದು ಗ್ರಾಮಸ್ಥರು ನೋವು ವ್ಯಕ್ತಪಡಿಸಿ ದರು. ಇದೇ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ದೇವರಾಜು ಅವರನ್ನು ಗ್ರಾಮಸ್ಥರು ಅಡ್ಡಗಟ್ಟಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವರಾಜು, ಹೆಮ್ಮಿಗೆ, ಕಾಗನೂರು, ಮಾಗಡಿ, ನಾಗವಾರ ಈ ಪ್ರದೇಶಗಳಲ್ಲಿ ಒಂದು ಕೇಂದ್ರಕ್ಕೆ 5ಜನ ಆನೆ ಕಾವಲಿಗೆ ನೇಮಿಸಿ ಒಬ್ಬರಿಗೆ 5000ರೂ ಪ್ರತಿ ತಿಂಗಳು ಸಂಬಳ ಕೊಡುತ್ತೇವೆ. ಅಲ್ಲದೇ ಆನೆ ಓಡಿಸಲು ಪಟಾಕಿ ಸಹ ನೀಡಲಾಗಿದೆ. ಏನಾದರೂ ತೊಂದರೆ ಆದರೆ ತಕ್ಷಣ ನಮಗೆ ತಿಳಿಸಿದರೆ ಮುಂಜಾಗ್ರತೆ ಕ್ರಮ ತೆಗೆದು ಕೊಳ್ಳಲು ಅನುಕೂಲವಾಗುತ್ತದೆ. ಬೆಳೆಹಾನಿಗೆ ತಕ್ಷಣ ವರದಿಯನ ಕಳುಹಿಸಿ ಕೊಡುವುದಾಗಿ ತಿಳಿಸಿದರು. ತಾಲ್ಲೂಕು ಜೆಡಿಎಸ್‌.ಅಧ್ಯಕ್ಷ  ಕೆ.ಎಸ್‌. ಮಂಜೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.