ಅರಸೀಕೆರೆ: ತಾಲ್ಲೂಕಿನಲ್ಲಿ ಬರದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಕುಡಿಯುವ ನೀರಿಲ್ಲದೇ ತೊಂದರೆ ಪಡುತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿದೆ. ಬೇಡಿಕೆ ಸೃಷ್ಟಿಯಾದಂತೆ ಮೇವಿನ ದರವೂ ಹೆಚ್ಚಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೇವಿನ ಬೆಲೆ ದುಪ್ಪಟ್ಟಾಗಿದೆ. ಹುಡುಕಿಕೊಂಡು ಹೋದರು ರೈತರಿಗೆ ಮೇವು ಸಿಗುತ್ತಿಲ್ಲ. ಆದರೂ ಖರೀದಿಸಲೇಬೇಕು ಎಂಬ ತಮ್ಮ ನೋವು ರೈತರದು.ಎರಡು ತಿಂಗಳಿನಿಂದ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಮೇವಿನ ಅಭಾವ ಉಂಟಾಗಿದೆ. ದೊಡ್ಡ ರೈತರು ಹೇಗಾದರೂ ಮೇವು ಖರೀದಿಸುತ್ತಾರೆ. ಆದರೆ, ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಮಾತ್ರ ಮೇವು ಖರೀದಿ ಕಷ್ಟವಾಗುತ್ತಿದೆ.
ಇದೇ ರೀತಿ ಮುಂದುವರಿದರೆ ನೀರು-ಮೇವು ಇಲ್ಲದೇ ಜಾನುವಾರು ಕಾಪಾಡಲು ಸಾಧ್ಯವಿಲ್ಲ. ಕಸಾಯಿಖಾನೆಗೆ ಮಾರಬೇಕಾದ ಸ್ಥಿತಿ ಬರಲಿದೆ. ಇದರಿಂದ ಹೈನುಗಾರಿಕೆಗೆ ದೊಡ್ಡ ಹೊಡೆತ ಬೀಳಲಿದೆ. ಆದ್ದರಿಂದ ಸರ್ಕಾರ ಹೋಬಳಿ ಕೇಂದ್ರಗಳಲ್ಲಿ ಶೀಘ್ರವೇ ಮೇವು ಕೇಂದ್ರ ತೆರೆಯಬೇಕು ಮತ್ತು ಕುಡಿಯುವ ನೀರನ್ನು ಒದಗಿಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಸರ್ಕಾರವೇ ಘೋಷಿಸಿ ಐದು ತಿಂಗಳು ಕಳೆದಿದ್ದರೂ ಬರ ಪರಿಹಾರ ನಿವಾರಣೆ ಹಾಗೂ ದುಡಿಯುವ ಕೈಗಳಿಗೆ ಕೆಲಸ ಕೊಡದೇ ನಿರ್ಲಕ್ಷಿಸಲಾಗಿದೆ ಎಂಬ ಕೂಗು ಬಲವಾಗಿದೆ. ತಾಲ್ಲೂಕಿನ ಜನತೆ ಬಿಸಿಲಿನ ಬೇಗೆಯಿಂದ ಕುಡಿಯಲು ನೀರಿಗಾಗಿ ಪರದಾಡುತ್ತಿರುವ ಬೆನ್ನಲ್ಲೇ ಕೆರೆ-ಕುಂಟೆಗಳು ಸಂಪೂರ್ಣವಾಗಿ ಬತ್ತಿ ಬರಿದಾಗಿವೆ.
ತಾಲ್ಲೂಕಿನ 5 ಹೋಬಳಿಗಳ 345 ವಸತಿ ಗ್ರಾಮ ಗಳಲ್ಲಿ ಪಶು ಪ್ರಾಣಿಗಳಲ್ಲದೇ ಜನರ ಹಿತಕ್ಕಾಗಿ ಕೆರೆ ಕುಂಟೆಗಳಿದ್ದರೂ ಸತತ ಮಳೆಯ ಅಭಾವದಿಂದ ಮಳೆಯ ನೀರು ಕೆರೆ-ಕುಂಟೆಗಳಿಗೆ ಸೇರದೆ ಅಂತರ್ಜಲ ಪ್ರಮಾಣ ಸಹ ಕುಸಿಯುತ್ತಿ ರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿಲ್ಲ. ಪ್ರತಿನಿತ್ಯ ನೀರಿಗಾಗಿ ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.