ADVERTISEMENT

ಚಿನ್ನ-ಬೆಳ್ಳಿಗೆ ವ್ಯಾಟ್ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 9:15 IST
Last Updated 23 ಮಾರ್ಚ್ 2011, 9:15 IST
ಚಿನ್ನ-ಬೆಳ್ಳಿಗೆ ವ್ಯಾಟ್ ಕೈಬಿಡಲು ಆಗ್ರಹ
ಚಿನ್ನ-ಬೆಳ್ಳಿಗೆ ವ್ಯಾಟ್ ಕೈಬಿಡಲು ಆಗ್ರಹ   

ಹಾಸನ: ‘ಚಿನ್ನ ಬೆಳ್ಳಿ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯನ್ನು ಶೇ 1ರಿಂದ ಶೇ 2ಕ್ಕೆ ಹೆಚ್ಚಿಸಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಇದನ್ನು ಕೂಡಲೇ ಕೈಬಿಡಬೇಕು’ ಎಂದು ಚಿನ್ನ-ಬೆಳ್ಳಿ ವರ್ತಕರ ಹಾಸನ ಜಿಲ್ಲಾಘಟಕ ಆಗ್ರಹಿಸಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಘಟಕದ ಕಾರ್ಯದರ್ಶಿ ಬಿ.ಎನ್.ಪ್ರಮೋದ್, ‘ಚಿನ್ನ ಬೆಳ್ಳಿಯ ಬೆಲೆ ಈಗಾಗಲೇ ಗಗನಕ್ಕೇರಿದೆ. ಅದರ ಮಧ್ಯದಲ್ಲೇ ತೆರಿಗೆಯನ್ನೂ ಹೆಚ್ಚಿಸಿರುವುದರಿಂದ ಚಿನ್ನ ಮತ್ತಷ್ಟು ದುಬಾರಿಯಾದಂತಾಗಿದೆ. ಸಾಮಾನ್ಯ ಗ್ರಾಹಕರಿಗೆ ಇದರಿಂದ ಕಷ್ಟವಾಗುತ್ತದೆ ಎಂದರು.

‘ಚಿನ್ನ-ಬೆಳ್ಳಿ ಈಗ ಬರಿಯ ಆಭರಣದ ವಸ್ತುವಾಗಿ ಉಳಿದಿಲ್ಲ. ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ವಸ್ತುವಾಗಿರುವುದರಿಂದ ಬಂಡವಾಳ ಇರುವವರೆಲ್ಲ ಚಿನ್ನ-ಬೆಳ್ಳಿ ಖರೀದಿಸಲು ಮುಂದಾಗುತ್ತಿದ್ದಾರೆ. ವ್ಯಾಟ್ ಇಳಿಸದಿದ್ದರೆ ಈ ಖರೀದಿದಾರರೆಲ್ಲ ನೆರೆ ರಾಜ್ಯಗಳಿಗೆ ಹೋಗಿ ಖರೀದಿ ನಡೆಸುತ್ತಾರೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ ಎಂದು ಪ್ರಮೋದ್ ನುಡಿದರು.

ಜಿಲ್ಲೆಯ ದೊಡ್ಡ ಮಳಿಗೆಗಳವರೂ ಸಹ ರಾಜ್ಯ ಬಿಟ್ಟು ಗಡಿಭಾಗದಲ್ಲಿ ವ್ಯಾಪಾರ ಆರಂಭಿಸುವ ಸಾಧ್ಯತೆ ಇರುವುದರಿಂದ ರಾಜ್ಯದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಚಿನ್ನ ಬೆಳ್ಳಿ ಮೇಲಿನ ವ್ಯಾಟ್ ರದ್ದು ಮಾಡಬೇಕು. ಈ ಸಂಬಂಧ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಬರುವ ಶುಕ್ರವಾರ ಒಂದು ದಿನ ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸುವ ಬಗ್ಗೆ ಸಂಘದ ರಾಜ್ಯ ಘಟಕ ತೀರ್ಮಾನ ಕೈಗೊಳ್ಳಲಿದೆ’ ಎಂದರು. ಆರ್.ರಾಜಗೋಪಾಲ ಶೆಟ್ಟಿ, ಎಚ್.ಎಂ. ಮಂಜುನಾಥ್, ಆರ್. ಮಹಾವೀರಚಂದ್ ಬನ್ಸಾಲಿ, ಜಿ.ವಿ. ಜಗನ್ನಾಥ್  ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.