ಹಾಸನ : ವಿಧಾನಸಭಾ ಚುನಾವಣೆಗೆ ಜಿಲ್ಲೆಗೆ ನಿಯೋಜಿಸಲ್ಪಟ್ಟಿರುವ ಚುನಾವಣಾ ವೆಚ್ಚ ವೀಕ್ಷಕರು ನೋಡಲ್ ಅಧಿಕಾರಿಗಳೊಂದಿಗೆ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಗುರುವಾರ ಸಭೆ ನಡೆಸಿ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲು ಹಲವು ಸಲಹೆ, ಸೂಚನೆ ನೀಡಿದರು.
ವೆಚ್ಚ ವೀಕ್ಷಕರಾದ ಅನೂಪ್ ಕುಮಾರ್, ರಾಘವೇಂದ್ರ ಪಾಲ್ ಸಿಂಗ್ ಹಾಗೂ ದೀಪಕ್ ಖೈರಾ ಅವರು ಬ್ಯಾಂಕ್ಗಳಲ್ಲಿ ನಡೆಯುವ ಅಸಹಜ ವಹಿವಾಟುಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ತಿಳಿಸಿದರು.
ಬ್ಯಾಂಕ್ಗಳಲ್ಲಿ ಇದ್ದಕ್ಕಿದ್ದಂತೆ ಭಾರಿ ಪ್ರಮಾಣದಲ್ಲಿ ನಗದು ಜಮಾ ಆಗಬಹುದು. ಹಣ ಹಿಂತೆಗೆಯುವುದು ಒಂದು ಖಾತೆಯಿಂದ ಅನೇಕ ಖಾತೆಗಳಿಗೆ ಹಣ ವರ್ಗಾವಣೆ, ಇಂತಹ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಬಕಾರಿ ಅಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಡಿಸ್ಟಲರಿ ಮತ್ತು ಖರೀದಿ ಕೇಂದ್ರ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಸರಬರಾಜುಗಳ ಬಗ್ಗೆ ಗಮನ ಹರಿಸಬೇಕು. ಅದೇ ರೀತಿ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ನಡೆಸುತ್ತಿರುವ ಮಾರಾಟ ಹಾಗೂ ಈ ಹಿಂದಿನ ಸರಾಸರಿಗಳ ಬಗ್ಗೆ ನಿರಂತರ ಕಣ್ಗಾವಲು ಇರಿಸಬೇಕು. ಅಕ್ರಮ ಸಾಗಾಣಿಕೆ ಬಗ್ಗೆಯೂ ಹೆಚ್ಚಿನ ತಪಾಸಣೆ ನಡೆಯಬೇಕು ಎಂದು ಸೂಚಿಸಿದರು.
ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹಿರಾತು ಹಾಗೂ ಕಾಸಿಗಾಗಿ ಸುದ್ದಿಗಳ ಬಗ್ಗೆ ಎಂ.ಸಿ.ಎಂ.ಸಿ. ಸಮಿತಿ ನಿರಂತರ ಪರಿಶೀಲನೆ ಮಾಡಬೇಕು. ಖಾಸಗಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಬಗ್ಗೆಯೂ ಗಮನ ಹರಿಸಬೇಕು. ಬಲ್ಕ್ ಎಸ್.ಎಂ.ಎಸ್.ಗಳು, ವಿದ್ಯುನ್ಮಾನ ಜಾಹೀರಾತುಗಳು ಪ್ರಸಾರ ಪೂರ್ವ ದೃಢೀಕರಣಗೊಳ್ಳಬೇಕು ಎಂದರು.
ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಸಭೆ ಸಮಾರಂಭಗಳ ಸಂಪೂರ್ಣ ಚಿತ್ರೀಕರಣವನ್ನು ಉತ್ತಮ ಗುಣಮಟ್ಟದೊಂದಿಗೆ ಮಾಡಿಕೊಳ್ಳ ಬೇಕು ಮತ್ತು ಅಲ್ಲಿ ಮಾಡಲಾಗುವ ಖರ್ಚು , ವೆಚ್ಚಗಳ ಬಗ್ಗೆ ಸರಿಯಾಗಿ ದಾಖಲೆ ಮಾಡಬೇಕು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.