ADVERTISEMENT

ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಇಳಿಮುಖ: ಅಮಿತ್ ಸಿಂಗ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 4:55 IST
Last Updated 20 ಏಪ್ರಿಲ್ 2012, 4:55 IST

ಹಾಸನ: ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆಯೇ? ಪೊಲೀಸ್ ದಾಖಲೆಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳು ನಿಜವಾಗಿಯೂ ಗಣನೀಯ ಮಟ್ಟದಲ್ಲಿ ಕಡಿಮೆಯಾಗಿವೆ.

2010-11 ಹಾಗೂ 2011-12ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನಗಳು ನಿತ್ಯದ ಮಾತಾಗಿದ್ದವು. ಈಗಲೂ ಅಲ್ಲೊಂದು ಇಲ್ಲೊಂದು ಪ್ರಕರಣ ನಡೆಯುತ್ತಿದ್ದರೂ, ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿವೆ. ಅನೇಕ ಅಪರಾಧಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

`ಕಳ್ಳತನ, ಸರಗಳ್ಳತನದಂಥ ಪ್ರಕರಣಗಳನ್ನು ನಿಯಂತ್ರಿಸಿದ್ದೇವೆ. ಒಂದೆರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದೆ. ಅವರನ್ನೂ ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ~ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ `ಪ್ರಜಾವಾಣಿ~ಗೆ ಗುರುವಾರ ತಿಳಿಸಿದರು.

`ಎರಡು ತಿಂಗಳಿಂದ ಜಿಲ್ಲೆಯ ವಿವಿಧೆಡೆ ಕ್ಲಬ್‌ಗಳು, ಜೂಜು ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ. ಪತ್ರಿಕಾ ಕಚೇರಿ ಹೆಸರಿನಲ್ಲಿ ಮಟ್ಕಾ ನಡೆಸುತ್ತಿದ್ದವರೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾತ್ರಿ ವೇಳೆ ಗಸ್ತು ತಿರುಗಾಟ ಹೆಚ್ಚಾಗಿದೆ. ಅಪರಾಧ ನಿಯಂತ್ರಿಸಲು ಎಲ್ಲ ಕ್ರಮ ಗೊಂಡಿದ್ದೇವೆ~ ಎಂದು ತಿಳಿಸಿದರು.

ಹೆಚ್ಚಿದ ಕೊಲೆ ಪ್ರಕರಣ: ಮನೆಗಳ್ಳತನ, ಸರಗಳ್ಳತನ, ಮಟ್ಕಾ-ಜೂಜಾಟಗಳನ್ನು ನಿಯಂತ್ರಿಸಿದ್ದರೂ, ಕಳೆದ ಒಂದೆರಡು ತಿಂಗಳಿನಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳ ಸಂಖ್ಯೆ ಆತಂಕ ಮೂಡಿಸುವಂತಿದೆ.

ಹಾಡಹಗಲಿನಲ್ಲೇ ಇಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯಾಗಾರದಲ್ಲಿ ನಡೆದ ಮಹಿಳೆಯ ಕೊಲೆಯೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಲವು ಕೊಲೆಗಳು ನಡೆದಿವೆ. ಒಂದೆರಡು ಪ್ರಕರಣಗಳನ್ನು ಬಿಟ್ಟರೆ ಬಹುತೇಕ ಎಲ್ಲ ಪ್ರಕರಣಗಳ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ ಎಂಬುದು ಸಮಾಧಾನದ ವಿಚಾರವಾಗಿದೆ.

`ಬಹುತೇಕ ಕೊಲೆಗಳು ಕುಟುಂಬದೊಳಗಿನ ಜಗಳದಿಂದ ಸಂಭವಿಸುತ್ತವೆ. ಆದರೆ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಯಸಳೂರು ಹಾಗೂ ಸಾರಿಗೆ ಸಂಸ್ಥೆಯಲ್ಲಿ ನಡೆದ ಕೊಲೆಗಳು ಆರ್ಥಿಕ ಲಾಭಕ್ಕಾಗಿ ಮಾಡಿದ ಕೊಲೆಗಳು~ ಎಂದು ತಿಳಿಸಿದರು.

`2010ರಲ್ಲಿ ಹಾಸನದ ಡೇರಿ ವೃತ್ತದಲ್ಲಿ ನಡೆದ ಕೊಲೆ ಹಾಗೂ ಕೆಲವು ತಿಂಗಳ ಹಿಂದೆ ಹಳೇ ಬೀಡು ಹೋಬಳಿ ಹಗರೆಯಲ್ಲಿ ನಡೆದ ಮಹಿಳೆ ಕೊಲೆ ಬಗೆಗೂ ಸುಳಿವು ಸಿಕ್ಕಿದ್ದು, ಶೀಘ್ರ  ಅಪರಾಧಿಗಳ ಬಂಧನವಾಗಲಿದೆ~ ಎಂದರು.

ಹೆದ್ದಾರಿಯಲ್ಲಿ ನಡೆಯುತ್ತಿರುವ ಡಕಾಯಿತಿ ನಿಯಂತ್ರಿಸಲು ಜಿಲ್ಲೆಯ ಹಲವೆಡೆ ಚೆಕ್‌ಪೋಸ್ಟ್‌ಹಾಕಿದ್ದೇವೆ. ಡಕಾಯಿತಿ ನಡೆದ  ಕೆಲವೇ ಗಂಟೆಗಳಲ್ಲಿ ಅಪರಾಧಿಗಳನ್ನು ಹಿಡಿದಿದ್ದೇವೆ ಎಂದರು.

ಟ್ರಾಫಿಕ್ ಸಮಸ್ಯೆಗೆ ಸಭೆ: `ಹಾಸನದಲ್ಲಿ ಎಲ್ಲೂ ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯಾಚರಣೆ ಮಾಡಿದರೆ ನಾಗರಿಕರಿಗೆ ತೊಂದರೆಯಾಗುತ್ತದೆ. ಹಿರಿಯ ನಾಗರಿಕರು, ಪತ್ರಕರ್ತರು ಹಾಗೂ ಇತರ ಗಣ್ಯರ ಸಭೆ ಕರೆದು ಸಲಹೆ ಸೂಚನೆ ಪಡೆಯುವ ಯೋಚನೆ ಇದೆ. ಅಲ್ಲಿ ಬರುವ ಸಲಹೆ  ಜಾರಿಗೊಳಿಸಿ ಪರಿಹಾರ ಕಂಡುಕೊಳ್ಳಲಾಗುವುದು~ ಎಂದರು.

ಜಿಲ್ಲೆಯಲ್ಲಿ ಮಹಿಳೆಯರ ನಾಪತ್ತೆ ಪ್ರಕರಣ ಹೆಚ್ಚುತ್ತಲೇ ಇವೆ. ಇದರಲ್ಲಿ ಹೆಚ್ಚಿನವು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದವುಗಳು. `ಕಾಣೆಯಾಗುವ ಶೇ 90ರಷ್ಟು ಯುವತಿಯರು ಕೆಲವು ತಿಂಗಳ ಬಳಿಕ ಮರಳುತ್ತಾರೆ. ಇನ್ನೂ ಹಲವು ಕಡೆ ಬೇರೆಯೇ ಕಾರಣಗಳಿರುತ್ತವೆ~ ಎಂಬುದು ಅವರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.