ADVERTISEMENT

ಪರಾರಿಯಾದ ವರನಿಗೂ ಕೂಡಿಬಂತು ಮದುವೆ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 8:50 IST
Last Updated 22 ಮಾರ್ಚ್ 2014, 8:50 IST

ಅರಸೀಕೆರೆ: ಸಪ್ತಪದಿ ತುಳಿಯಲು ಕೆಲವೇ ನಿಮಿಷಗಳಿರುವಾಗ ಕಲ್ಯಾಣ ಮಂಟಪದಿಂದಲೇ ನಾಪತ್ತೆಯಾದ ವರನನ್ನು ಹುಡುಕಿ ತಂದು ಶಾಸಕರ ಮಧ್ಯಸ್ಥಿಕೆಯಲ್ಲಿ ವಿವಾಹ ಮಾಡಿಸಿದ ಅಪರೂಪದ ಘಟನೆ ತಾಲ್ಲೂಕಿನ ಹಾರನಹಳ್ಳಿಯಲ್ಲಿ ಗುರುವಾರ ನಡೆದಿದೆ.

ಹೊಳೆನರಸೀಪುರ ತಾಲ್ಲೂಕಿನ ತಾತನಹಳ್ಳಿ ಗ್ರಾಮದ ನಿವಾಸಿ ವೀರಭದ್ರಪ್ಪ ಎಂಬುವರ ಪುತ್ರ ರವಿ ಎಂಬಾತನಿಗೆ ಅರಸೀಕೆರೆ ತಾಲ್ಲೂಕಿನ ಕನಕಂಚೇನಹಳ್ಳಿ ಗ್ರಾಮದ ನಿವಾಸಿ ಸಿದ್ದಪ್ಪ ಎಂಬುವರ ಪುತ್ರಿ ರೂಪ ಜತೆ ವಿವಾಹ ನಿಶ್ಚಯವಾಗಿತ್ತು. ರವಿ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾರ್ಚ್ 19ರ ಬುಧವಾರ ರಾತ್ರಿ ಹಾರನಹಳ್ಳಿ ಕೋಡಮ್ಮದೇವಿ ಕಲ್ಯಾಣ ಮಂಟಪದಲ್ಲಿ ಯಾವುದೇ ಅಡಚಣೆ ಇಲ್ಲದೆ ದೇವತಾ ಕಾರ್ಯಗಳು ಸಂಭ್ರಮದಿಂದ ನೆರವೇರಿದವು. ಆದರೆ, ಗುರುವಾರ ಬೆಳಿಗ್ಗೆ ವರ ಕಲ್ಯಾಣಮಂಟಪದಿಂದಲೇ ನಾಪತ್ತೆಯಾಗಿದ್ದ. ಇದರಿಂದ ಗಲಿಬಿಲಿಗೊಂಡ ವಧುವಿನ ಕುಟುಂಬದವರು ಅರಸೀಕೆರೆ ಗ್ರಾಮಾಂತರ ಪೊಲೀಸ್‌ ಸಿಪಿಐ ಆರ್‌. ಗಂಗಾಧರಪ್ಪ ಅವರಿಗೆ ಸುದ್ದಿ ಮುಟ್ಟಿಸಿದರು.

ತಕ್ಷಣ ಕಾರ್ಯಪ್ರವೃತ್ತರಾದ ಗಂಗಾಧರಪ್ಪ ಅವರು ಖಚಿತ ಮಾಹಿತಿ ಮೇರೆಗೆ ರವಿ ಅವರನ್ನು ತುಮಕೂರು ಜಿಲ್ಲೆಯ ಗುಬ್ಬಿ ಸಮೀಪ ಪತ್ತೆ ಹಚ್ಚಿ ಕಲ್ಯಾಣ ಮಂಟಪಕ್ಕೆ ಕರೆ ತಂದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಕಲ್ಯಾಣ ಮಂಟಪಕ್ಕೆ ಆಗಮಿಸಿ ಕಾರಣವಿಲ್ಲದೆ ಮದುವೆ ನಿರಾಕರಿಸಿದ ವರನೊಂದಿಗೆ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಸಫಲರಾದರು. ಬಳಿಕ ಹಿರಿಯರ ಹಾಗೂ ಬಂಧು–ವರ್ಗದವರ ಮಾರ್ಗದರ್ಶನದಲ್ಲಿ ವಿವಾಹ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.