ADVERTISEMENT

ಬಹುತೇಕ ಸದಸ್ಯರ ಗೈರು ನಡುವೆ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 5:15 IST
Last Updated 11 ಜೂನ್ 2011, 5:15 IST

ಹಿರೀಸಾವೆ: ಗ್ರಾಮ ಪಂಚಾಯತಿಯ ಐವರು ಸದಸ್ಯರು ಮತ್ತು ಬೆರಳಣಿಕೆಯ ನಾಗರಿಕರ ಹಾಜರಿಯಲ್ಲಿಯೇ ಹಿರೀಸಾವೆಯ ಗ್ರಾಮ ಪಂಚಾಯಿತಿಯ ಕಚೇರಿಯಲ್ಲಿ ಗ್ರಾಮ ಸಭೆ ಶುಕ್ರವಾರ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಸವ-ಇಂದಿರಾ ವಸತಿ ಯೋಜನೆಯಲ್ಲಿ 60 ಮನೆಗಳ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿದ್ದು, ಅದರಲ್ಲಿ ಹಲವು ಲೋಪ ಇವೆ ಎಂದು ಕೆಲವು ಸದಸ್ಯರುಗಳು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರದ ಸಭೆ ಮಹತ್ವ ಪಡೆದಿತ್ತು.

ಆದರೆ, ಪಟ್ಟಣದಿಂದ 11 ಮತ್ತು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಂದ 11, ಒಟ್ಟು 22 ಸದಸ್ಯರಲ್ಲಿ ಅಧ್ಯಕ್ಷರು ಸೇರಿದಂತೆ ಐದು ಸದಸ್ಯರು ಭಾಗವಹಿಸಿದ್ದರು. ಫಲಾನುಭವಿಗಳ ಪಟ್ಟಿಯನ್ನು ಬಹಿರಂಗಪಡಿಸಿದಾಗ ಯಾರೂ ಆಕ್ಷೇಪಣೆ ಎತ್ತಲ್ಲಿಲ್ಲ ಮತ್ತು ಲೋಪಗಳ ಬಗ್ಗೆಯು ಚರ್ಚೆ ನಡೆಯಲ್ಲಿಲ್ಲ. ವಿವಿಧ ಸೌಲಭ್ಯಗಳಿಗಾಗಿ 5 ಅರ್ಜಿಗಳನ್ನು ಸ್ವೀಕರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಸ್.ರವಿಕುಮಾರ್ ಮಾತನಾಡಿ, ಇಂದಿನ ಸಭೆಯ ಸ್ಥಿತಿ ನೋಡಿದರೆ ಪಂಚಾಯಿತಿ ಸದಸ್ಯರಲ್ಲಿ ರಾಜಕೀಯ ದ್ವೇಷವಿದೆಯೇ ಹೊರತು, ಅಭಿವೃದ್ಧಿಯ ಚಿಂತನೆ ಇಲ್ಲ. ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಡಿ.ಜಿ.ಅಂಬಿಕಾರಾಮಕೃಷ್ಣ, ಸದಸ್ಯರ ಗೈರುಹಾಜರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಜಿ.ಮಂಜುನಾಥ ಮಾತನಾಡಿ, ಎಲ್ಲ ಸದಸ್ಯರ ಸೂಚನೆಯಂತೆ ಪಟ್ಟಿಯನ್ನು ಸಿದ್ಧಪಡಿಸಿ, ಇಂದು ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದೇನೆ. ಯಾವೂದೇ ಅವ್ಯವಾಹಾರ ನಡೆಸಿಲ್ಲ ಎಂದು ನುಡಿದರು.

ಲೋಪ-ದೋಷದ ಬಗ್ಗೆ ಸದಸ್ಯರುಗಳು ಮತ್ತು ನಾಗರಿಕರು ಆಕ್ಷೇಪಣೆ ಸಲ್ಲಿಸಿದರೆ ಪರಿಶೀಲನೆ ಮಾಡಲಾಗುವುದು, ಅರ್ಹರಲ್ಲದವರನ್ನು ಕೈ ಬಿಡಲಾಗುವುದು ಎಂದು ಹೇಳಿದರು.

ನೋಡೆಲ್ ಅಧಿಕಾರಿ ಸಿಡಿಪಿಒ ಗಂಗಪ್ಪಗೌಡ, ಸಹಾಯಕ ನೋಡೆಲ್ ಅಧಿಕಾರಿಗಳಾದ, ಶಿಕ್ಷಕ ಪ್ರಕಾಶ್, ಹಾಸ್ಟೆಲ್ ವಾರ್ಡ್‌ನ್ ರಾಜೇಶ್ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯದರ್ಶಿ ಎನ್.ರಂಗೇಗೌಡ ಮಾತನಾಡಿ, ಎಲ್ಲಾ ಸದಸ್ಯರಿಗೂ ಗ್ರಾಮ ಸಭೆ ನಡೆಯುವ ಬಗ್ಗೆ ಮಾಹಿತಿ ನೀಡಿ ಸಹಿ ಪಡೆಯಲಾಗಿದೆ ಮತ್ತು ಗ್ರಾಮದಲ್ಲಿ ಟಾಂಟಂ ಹೊಡೆಸಲಾಗಿದೆ ಎಂದು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.