ADVERTISEMENT

ಬಾಣಾವರ: ಕುಡಿಯುವ ನೀರಿಗೆ ತತ್ವಾರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 7:00 IST
Last Updated 12 ಜುಲೈ 2013, 7:00 IST

ಬಾಣಾವರ: ಶಾಶ್ವತ ನೀರಾವರಿ ಯೋಜನೆಯ ಸಹಾಯವಿಲ್ಲದೇ, ಮಳೆರಾಯನ ಕರುಣೆಯೂ ಇಲ್ಲದೇ ತತ್ತರಿಸುತ್ತಿರುವ ಬಾಣಾವರದಲ್ಲಿ ಈಗ ಕುಡಿಯುವ ನೀರಿಗೂ ಜನರು ನಿತ್ಯ ಪರದಾಡುವಂತಾಗಿದೆ.

ನೀರಿಗಾಗಿ ಮಹಿಳೆಯರು, ಮಕ್ಕಳು, ಯುವಕರು ನಿತ್ಯವೂ ಖಾಲಿ ಬಿಂದಿಗೆ ಹಿಡಿದು ಸೈಕಲ್, ಬೈಕ್‌ಗಳಲ್ಲಿ ಅಲೆಯುವುದು ಕಾಣುತ್ತಿದೆ. ವರುಣನ ಅವಕೃಪೆಯಿಂದ ಕೆರೆಕಟ್ಟೆಗಳು ಬತ್ತಿವೆ. ಪ್ರತಿವರ್ಷ ಮಳೆಯ ಮುನಿಸಿನಿಂದ ಅಂತರ್ಜಲದ ಮಟ್ಟ ಗಣನೀಯವಾಗಿ ಪಾತಾಳಕ್ಕಿಳಿದಿದೆ. ಪಟ್ಟಣದ ಜನರಿಗೆ ನೀರು ಒದಗಿಸುತ್ತಿದ್ದ 9 ನಳನೀರು ಮತ್ತು ಕೊಳವೆ ಬಾವಿಗಳಲ್ಲೂ (ಮೇಜರ್ ವಾಟರ್) ನೀರಿಲ್ಲ. ಇರುವ 10 ಕಿರು ನೀರು ಕೊಳವೆ ಬಾವಿಗಳಲ್ಲಿ ಕೇವಲ 3ರಲ್ಲಿ ಮಾತ್ರ ಸದ್ಯ ನೀರು ಸಿಗುತ್ತಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಇರುವ 45 ಬೋರ್‌ವೆಲ್‌ಗಳು ಅಂತರ್ಜಲವಿಲ್ಲದೇ ಕೆಟ್ಟು ನಿಂತಿವೆ.

ಎಲ್ಲ ಮೂಲಗಳಲ್ಲೂ ಜಲ ಸಂಪನ್ಮೂಲ ಬತ್ತಿರುವುದರಿಂದ ಪಟ್ಟಣದಲ್ಲಿರುವ ಮುಖ್ಯ ಟ್ಯಾಂಕ್‌ಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ನೀರಿಗಾಗಿ ಜನರು ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ರೂ 400-450 ತೆತ್ತು ಟ್ಯಾಂಕರ್‌ಗಳಿಂದ ನೀರು ತಂದು ಕುಡಿಯುವಂಥ ಸ್ಥಿತಿ ನಿರ್ಮಾಣವಾಗಿದೆ. ಬಡವರೂ ಸಹ ಕೊಡವೊಂದಕ್ಕೆ ರೂ 3ರಂತೆ ಹಣ ತೆತ್ತು ಕುಡಿಯುವಂತಾಗಿದೆ. ಒಂದೊಂದು ಬಿಂದಿಗೆ ನೀರಿಗೂ ಹಣ ಕೂಡಬೇಕಿರುವುದರಿಂದ ನೀರಿನ ಅಭಾವಕ್ಕೆ ಅಂಜಿ ಜನರು ಮನೆಗೆ ನೆಂಟರು, ಬಂಧುಗಳು ಬರುವುದೇ ಬೇಡ ಎಂದು ಪ್ರಾರ್ಥಿಸುತ್ತಿದ್ದಾರೆ.

ದಶಕದಿಂದ ಸರಿಯಾಗಿ ಮಳೆಯಾಗದೇ ಇರುವುದರಿಂದ ಕೆರೆ ಕಟ್ಟೆಗಳೆಲ್ಲ ತುಂಬದೇ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. 500-800 ಅಡಿ ಕೊರೆದರೂ ನೀರು ಸಿಗದೇ ಹೊಸ ಕೊಳವೆ ಬಾವಿಗಳು ಜನರನ್ನು ನಿರಾಸೆಯ ಮಡುವಿಗೆ ನೂಕುತ್ತಿವೆ. ಈ ವರ್ಷ ಮಳೆಗಾಲ ಆರಂಭಗೊಂಡು ತಿಂಗಳುರುಳಿದರೂ 62.22 ಮಿ.ಮೀ ನಷ್ಟು ಮಾತ್ರ ಮಳೆಯಾಗಿದೆ.

ಕೆರೆ ತುಂಬಿದರೆ ಮಾತ್ರ ಈಗಿನ ಕುಡಿಯುವ ನೀರಿನ ಬವಣೆ ನೀಗಲು ಸಾಧ್ಯ, ಜಾನುವಾರುಗಳನ್ನು ಸಲಹುವುದಕ್ಕಾದರೂ ಮೇವು ದೊರೆಯುತ್ತದೆ. ಕಳೆದ ದಶಕದಿಂದ ಸರಿಯಾದ ಮಳೆಯನ್ನೇ ಕಾಣದ ಪಟ್ಟಣದ ಕೆರೆಗಳಿಗೆ ಸರ್ಕಾರ, ಜನಪ್ರತಿನಿಧಿಗಳು ನೀರು ತುಂಬಿಸುವ ಶಾಶ್ವತ ಯೋಜನೆಗಳ ಬಗ್ಗೆ ಯೋಚಿಸಬೇಕು.  ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಹೇಮಾವತಿ ನದಿ ನೀರನ್ನು ಆದಷ್ಟು ಬೇಗ ಬಾಣಾವರಕ್ಕೆ ತರಿಸಲು ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿ ಎನ್ನುವುದು ಸಾರ್ವಜನಿಕರ ಮನವಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.