ಹಾಸನ: `ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಅನಿಷ್ಠ ಪದ್ಧತಿ. ಇದನ್ನು ತೊಡೆದು ಹಾಕುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ' ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಸೋಮಶೇಖರ್ ನುಡಿದರು.
ವಿಶ್ವ ಬಾಲ ಕಾರ್ಮಿಕ ವಿರೊಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಕೀಲರ ಸಂಘಗಳ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಮಕ್ಕಳ ಭವಿಷ್ಯ ಬಾಲ್ಯದ್ಲ್ಲಲೇ ಕಮರದಂತೆ ಪೋಷಿಸುವುದು ಸಮಾಜದ ಹೊಣೆ. ಜಗತ್ತಿನಲ್ಲಿ ಇನ್ನೂ ಕೋಟ್ಯಂತರ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕೆಲವು ಶ್ರೀಮಂತರ ಮನೆಗಳಲ್ಲಿ ಮಕ್ಕಳನ್ನು ಇರಿಸಿ ಶೋಷಿಸಲಾಗುತ್ತಿದೆ. ಈ ಬಾರಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮನೆ ಗೆಲಸಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವು ದರ ವಿರುದ್ಧ ಜಾಗೃತಿ ಮೂಡಿಸುವ ಉದ್ದೆೀಶ ಹೊಂದಿದೆ. ಮಕ್ಕಳನ್ನು ಭಯೋತ್ಪಾದನೆ, ವೇಶ್ಯಾವಾಟಿಕೆಗಳಿಗೂ ಬಳಸುತ್ತಿದ್ದು, ಈ ಅನಿಷ್ಠವನ್ನು ಶಾಶ್ವತವಾಗಿ ಕೊನೆಗಾಣಿಸಬೇಕಿದೆ' ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಸಿ.ಜೆ.ಎಂ. ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುಸ್ತಫಾ ಹುಸೇನ್ ಪ್ರತಿಜ್ಞಾವಿಧಿ ಬೋಧಿಸಿದರು.
ವಿಶೇಷ ಉಪನ್ಯಾಸ ನೀಡಿದ ಕೃಷ್ಣ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ. ಶಿವರಾಂ, `ಬಾಲಕಾರ್ಮಿಕ ಪದ್ಧತಿ ಜಾಗತಿಕ ಸಮಸ್ಯೆ. ವಿಶ್ವದಲ್ಲಿ 22 ಕೋಟಿ ಬಾಲ ಕಾರ್ಮಿಕರಿದ್ದಾರೆ. ಭಾರತದಲ್ಲಿ ಕೃಷಿ ಕ್ಷೇತ್ರದಲ್ಲೇ ಹೆಚ್ಚಾಗಿ ಬಾಲಕಾರ್ಮಿಕರನ್ನು ದುಡಿಸಿಕೊಳ್ಳಲಾ ಗುತ್ತಿದೆ. ಅದರ ತಡೆಗೆ ಪರಿಣಾಮಕಾರಿ ಕಾನೂನು ರೂಪುಗೊಳ್ಳಬೇಕು. 1948ರಿಂದಲೂ ಬಾಲ ಕಾರ್ಮಿಕ ಪದ್ಧತಿ ನಿಷೇಧ ಪ್ರಯತ್ನ ನಡೆಯುತ್ತಿದೆ' ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, `ಇನ್ನೂ ಚಾಲ್ತಿಯಲ್ಲಿರುವ ಬಾಲ ಕಾರ್ಮಿಕ ಪದ್ಧತಿ ತೊಡೆದು ಹಾಕಲು ಕಾನೂನು ಜೊತೆಗೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹ ಸಹಕರಿಸಬೇಕು' ಎಂದರು.
ಬಾಲ ಕಾರ್ಮಿಕರಾಗಿದ್ದು, ಸ್ವಯಂ ಸೇವಾ ಸಂಸ್ಥೆ ನೆರವಿನಿಂದ ರಕ್ಷಣೆ ಪಡೆದು ಓದಿ ಈಗ ಉದ್ಯೋಗದಲ್ಲಿರುವವರು ತಮ್ಮ ಅನುಭವ ಹಂಚಿಕೊಂಡರು.
ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಎಚ್.ಎನ್.ಅಭಿನಂದ್ ಹಾಗೂ ದ್ವಿಚಕ್ರ ವಾಹನ ಕಾರ್ಯಾಗಾರಗಳ ಮಾಲೀಕರ ಮತ್ತು ತಂತ್ರಜ್ಞಾನ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಷಫಿ ಅಹಮದ್ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ಬಸವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದೇಶಕ ಚಿದಾನಂದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ಯಾಮಲಾದೇವಿ, ಮಕ್ಕಳ ರಕ್ಷಣಾಧಿಕಾರಿ ಗೀತಾ, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕಿ ನವ್ಯಾ ಇದ್ದರು.
ಉಪ ಕಾರ್ಮಿಕ ಆಯುಕ್ತ ಡಾ. ಬಾಲಕೃಷ್ಣ ಸ್ವಾಗತಿಸಿದರು. ಕಾರ್ಮಿಕ ಅಧಿಕಾರಿ ಕೆ.ಎಸ್.ಪ್ರಹ್ಲಾದ್ ವಂದಿಸಿದರು.
ಬೇಲೂರು ವರದಿ: ಬಾಲ ಕಾರ್ಮಿಕರನ್ನು ದುಡಿಮೆಗೆ ಕಳುಹಿಸಬಾರದು ಎಂಬ ನಿಯಮವಿದ್ದರೂ ಕೆಲ ಪೋಷಕರು ಹಣದಾಸೆಗೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸು ತ್ತಿದ್ದಾರೆ ಎಂದು ಹೊಯ್ಸಳ ಶಾಲೆಯ ಮುಖ್ಯ ಶಿಕ್ಷಕ ಎ.ಹನುಮೇಗೌಡ ವಿಷಾದಿಸಿದರು.
ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದ ಅವರು, ಕುಟುಂಬದ ಆಸರೆಗಾಗಿ ಮಕ್ಕಳನ್ನು ದುಡಿಮೆಗೆ ಹಚ್ಚುವುದು ಸರಿಯಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಮುಖ್ಯ. ಮಕ್ಕಳಿಗೆ ಸರ್ಕಾರ ಎ್ಲ್ಲಲ ಸೌಲಭ್ಯ ನೀಡಿ ಶಿಕ್ಷಣ ಕಲಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಲ ಪರಿಸರದಲ್ಲಿ 14 ವರ್ಷದೊಳಗಿನ ಮಕ್ಕಳು ಕೆಲಸ ಮಾಡುತ್ತಿದ್ದರೆ. ಅಂತಹವರ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.