ಹಳೇಬೀಡು: ಶುಂಠಿ ಬೆಲೆ ತೀವ್ರ ಕುಸಿತ ಕಂಡಿರುವುದರಿಂದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.
ಹಳೇಬೀಡು ಸುತ್ತಲಿನ ಹೆಚ್ಚಿನ ರೈತರು ಭಾರಿ ಬೆಲೆ ಬರುವ ಕನಸು ಕಂಡು ಶುಂಠಿ ಬಿತ್ತನೆ ಮಾಡಿದರು. ಆದರೆ, ಬೆಳೆ ರೋಗಗಳಿಗೆ ತುತ್ತಾಗಿದ್ದರಿಂದ ರೈತರು ಅವಧಿಗೆ ಮುನ್ನ ಕಟಾವು ಮಾಡಿ ಮಾರಾಟ ಮಾಡುತ್ತಿದ್ದಾರೆ.
ನಿರೀಕ್ಷಿತ ಫಸಲು ಬರುವ ಮೊದಲೇ ಕಟಾವು ಮಾಡಿದ್ದಲ್ಲದೇ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ರೈತರು ಚಿಂತಾಕ್ರಾಂತವಾಗಿದ್ದಾರೆ. 60 ಕೆಜಿ ತೂಕದ ಒಂದು ಚೀಲ ಶುಂಠಿ ರೂ.450ರಿಂದ 500ರವರೆಗೆ ಮಾರಾಟವಾಗುತ್ತಿದೆ.
ಎರಡು ವರ್ಷದ ಹಿಂದೆ ರೂ.2000ದಿಂದ 3000ದ ವರೆಗೆಇದ್ದ ಬೆಲೆ ಈಗ ಪಾತಳಕ್ಕೆ ಕುಸಿದಿದೆ. ಮಾರುಕಟ್ಟೆಗೆ ಈಗ ಭಾರಿ ಪ್ರಮಾಣದಲ್ಲಿ ಶುಂಠಿಯೂ ಆಗಮಿಸಿಲ್ಲ. ಕಟಾವು ಮಾಡುವ ಆರಂಭವಾದ ನಂತರ ಹೆಚ್ಚಿನ ಮಾಲು ಮಾರುಕಟ್ಟೆಗೆ ಬಂದರೆ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.
ಹೆಚ್ಚಿನ ಕಾರ್ಮಿಕರನ್ನು ಅವಲಂಬಿಸಿ ವರ್ಷವಿಡಿ ದುಡಿಯಬೇಕು. ಔಷಧ ಗೊಬ್ಬರಕ್ಕಾಗಿಯೂ ಸಾಕಷ್ಟು ಹಣ ವೆಚ್ಚ ಮಾಡಬೇಕು. ಈಗಿನ ಮಾರುಕಟ್ಟೆ ದರದಲ್ಲಿ ಸಾಲ ಮಾಡಿ ಹಾಕಿದ ಬಂಡವಾಳ ಮರಳುವ ಸಂಶಯಗಳಿವೆ ಎತ್ತಾವ ಮಾತು ರೈತರಿಂದ ಕೇಳಿಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.