ADVERTISEMENT

ಮಯೂರ ಹೋಟೆಲ್ ಅಭಿವೃದ್ಧಿಗೆ ರೂ13 ಲಕ್ಷ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 9:15 IST
Last Updated 1 ಅಕ್ಟೋಬರ್ 2011, 9:15 IST

ಹಳೇಬೀಡು: ಅವ್ಯವಸ್ಥೆಯ ಆಗರವಾಗಿದ್ದ ಪಟ್ಟಣದ ಕೆಎಸ್‌ಟಿಡಿಸಿ ಸ್ವಾಮ್ಯದ ಹೊಟೇಲ್ ಶಾಂತಲಾ ಮಯೂರ ಹಾಗೂ ವಸತಿಗೃಹ ಅಭಿವೃದ್ಧಿಗೆ ರೂ.13 ಲಕ್ಷ ಹಣ ಬಿಡುಗಡೆಯಾಗಿದೆ. ಹೊಟೇಲ್‌ಗೆ ಸಾಕಷ್ಟು ಸೌಲಭ್ಯ ಹರಿದು ಬರುತ್ತಿದ್ದರೂ, ಇಲ್ಲಿ ನಾಲ್ಕು ಕೊಠಡಿಗಳು ಮಾತ್ರ ಇರುವುದರಿಂದ ಹೆಚ್ಚಿನ ಪ್ರವಾಸಿಗರು ವಾಸ್ತವ್ಯ ಮಾಡಲು ಅವಕಾಶ ಇಲ್ಲದಂತಾಗಿದೆ.

`ಪ್ರವಾಸೋದ್ಯಮ ಇಲಾಖೆ ಹಾಗೂ ಕೆಎಸ್‌ಟಿಡಿಸಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಾಕಷ್ಟು ಹಣ ವಿನಿಯೋಗಿ ಸುತ್ತಿವೆ. ಹಳೇಬೀಡಿನ ಹೊಟೇಲ್ ಮಯೂರ ಶಾಂತಲಾದಲ್ಲಿಯೂ ಹೆಚ್ಚುವರಿ ಕೊಠಡಿ ನಿರ್ಮಿಸಲು ಕೆಎಸ್‌ಟಿಡಿಸಿ ಮುಂದಾಗಿದೆ.
 
ಹೊಯ್ಸಳ ದೇಗುಲದ ಸನಿಹದಲ್ಲಿ 100 ಮೀಟರ್ ಅಂತರದಲ್ಲಿ ಹೊಟೇಲ್ ಇರುವುದರಿಂದ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಇರುವ ವ್ಯವಸ್ಥೆಯಲ್ಲಿಯೇ ಸಂಸ್ಥೆ ಪ್ರವಾಸಿಗರಿಗಾಗಿ ಸಾಕಷ್ಟು ಸವಲತ್ತು ನೀಡುತ್ತಿದೆ~ ಎನ್ನುತ್ತಾರೆ ಹೊಟೇಲ್ ಮಯೂರ ಶಾಂತಲಾ ವ್ಯವಸ್ಥಾಪಕ ಪಾಪಣ್ಣ.

ಹೊಟೇಲ್‌ನಲ್ಲಿ ಒಂದು ವರ್ಷದಿಂದಲೂ ವ್ಯವಸ್ಥಾಪಕರ ಹುದ್ದೆ ಖಾಲಿ ಇತ್ತು. ಇರುವ ಸಿಬ್ಬಂದಿ ಪ್ರವಾಸಿಗರ ಸೇವೆ ಮಾಡಲು ಅಗತ್ಯವಾದ ಸಂಪೂನ್ಮೂಲಗಳಿಲ್ಲದೆ ಪರದಾಡುವಂತಾಗಿತ್ತು.

ಕೆಎಸ್‌ಟಿಡಿಸಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಹೊಟೇಲ್ ಅಭಿವೃದ್ಧಿಗೆ ಅಂದಾಜು ಸಿದ್ದಪಡಿಸಿ ಹಣ ಮಂಜೂರು ಮಾಡಿದ್ದಾರೆ. ಈಗಾಗಲೇ ರೂ.85.000 ಬೆಲೆ ಬಾಳುವ ವ್ಯವಸ್ಥಿತವಾದ ಪೀಠೋಪಕರಣಗಳ ಸರಬರಾಜಾಗಿದೆ.

ಕಟ್ಟಡದ ಛಾವಣಿಯಲ್ಲಿ ಆಗುವ ಸೋರಿಕೆ ತಪ್ಪಿಸಲು ರೂ.2.57 ಲಕ್ಷ, ಶೌಚಾಲಯ, ಕೈತೊಳೆಯುವ ಬೇಸಿನ್ ಮೊದಲಾದ ಸ್ಥಳಗಳಲ್ಲಿ ಟೈಲ್ಸ್ ಅಳವಡಿಸಲು ರೂ.4.86 ಲಕ್ಷ, ಕುಡಿಯುವ ನೀರು ಹಾಗೂ ಸ್ಯಾನಿಟರಿ ಪೈಪ್‌ಲೈನ್ ದುರಸ್ತಿಗೆ ರೂ.1.53 ಲಕ್ಷ ಅಡಿಗೆ ಕೋಣೆ, ರೆಸ್ಟೊರೆಂಟ್ ನವೀಕರಣಕ್ಕೆ ರೂ.4.99 ಲಕ್ಷ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಕೆಎಸ್‌ಟಿಡಿಸಿ ಉನ್ನತ ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.