ADVERTISEMENT

ಮಳೆ ಆಸೆ ಕೈಬಿಟ್ಟ ರೈತ; ನೆಲ ಹಿಡಿದ ಬೆಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 8:20 IST
Last Updated 16 ಸೆಪ್ಟೆಂಬರ್ 2011, 8:20 IST
ಮಳೆ ಆಸೆ ಕೈಬಿಟ್ಟ ರೈತ; ನೆಲ ಹಿಡಿದ ಬೆಳೆ
ಮಳೆ ಆಸೆ ಕೈಬಿಟ್ಟ ರೈತ; ನೆಲ ಹಿಡಿದ ಬೆಳೆ   

ಹಳೇಬೀಡು: ಎರಡು ದಿನದಿಂದ ಮಳೆ ಬಂದರೂ ರೈತರ ಮೊಗದಲ್ಲಿ ನಿರಾಸೆಯ ಛಾಯೆ ಮುಂದುವರೆದಿದೆ. ಬಿತ್ತನೆಯಿಂದ ಬೆಳೆಯ ವಿವಿಧ ಹಂತದ ಬೆಳೆವಣಿಗೆಯಲ್ಲಿ ಕೈಕೊಟ್ಟ ಮಳೆ ಇದೀಗ ಬಂದರೂ ಪ್ರಯೋಜನವಿಲ್ಲ ಎನ್ನುವ ಮಾತು ರೈತರಿಂದಲೇ ಕೇಳಿಬರುತ್ತಿದೆ.

ಮಳೆ ಇಲ್ಲದೇ ಕೆರೆ ಕಟ್ಟೆಗಳು ನೀರಿಲ್ಲದೆ ಭಣಗುಡುತ್ತಿವೆ. ಆಗೊಮ್ಮ ಈಗೊಮ್ಮೆ ಅಪರೂಪಕ್ಕೆ ಉದುರಿದ ಮಳೆಯಿಂದ ಕೆರೆ ಕಟ್ಟೆಗೆ ಹನಿ ನೀರು ಬಂದಿಲ್ಲ. ತುಂಬಿದರೆ ಸಮುದ್ರದಂತೆಯೇ ಕಾಣುವ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಈಗ ಬಿದ್ದಿರುವ ಮಳೆ ಜೋರಾಗಿ ಬಂದರೆ, ಬೆಳೆ ಹೋದರೂ ಕೆರೆ ಕಟ್ಟೆಗಳಾದರೂ ತುಂಬುತ್ತವೆ ಎನ್ನುತ್ತಾರೆ ರೈತರು.

ಕಡಿಮೆ ಫಸಲು: ತಡವಾಗಿ ಬಿತ್ತನೆ ಮಾಡಿದ ಮೆಕ್ಕೆ ಜೋಳದ ಬೆಳೆಗೆ ಬಿದ್ದಿರುವ ಮಳೆ ವರದಾನವಾಗಿದೆ. ನಾಪತ್ತೆಯಾಗಿದ್ದ ಮಳೆರಾಯ ರುದ್ರನರ್ತನ ಆರಂಭಿಸಿದರೆ ಕಟಾವಿಗೆ ಬಂದಿರುವ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೊಲದಲ್ಲಿರುವ ಜೋಳ ಮೊಳಕೆಯೊಡೆಯುತ್ತದೆ. ಒಂದು ವೇಳೆ ಮಳೆ ಬಿಡುವು ಕೊಟ್ಟರೂ ಮಳೆ ಇಲ್ಲದೆ ಬೆಳೆದಿರುವ ಬೆಳೆಯಲ್ಲಿ ನಿರೀಕ್ಷಿತ ಫಸಲು ದೊರಕುವುದಿಲ್ಲ.

ಜೊಳ್ಳಾದ ಸೂರ್ಯಕಾಂತಿ: ಸೂರ್ಯಕಾಂತಿ ಕೊಯ್ಲು ಮುಗಿದ್ದಿದ್ದು, ಫಸಲು ಕಡಿಮೆಯಾ ಗಿದ್ದರಿಂದ ರೈತರ ನಿರೀಕ್ಷೆಯಂತೆ ಆದಾಯ ಬರಲಿಲ್ಲ. ಕಟಾವು ಮಾಡಿದ ಸೂರ್ಯಕಾಂತಿ ಜೊಳ್ಳಾಗಿದ್ದರಿಂದ ಚೀಲದ ಭರ್ತಿ ಮಾಡಿ ಮಾರಾಟ ಮಾಡಿದರೂ ರೈತರ ಜೇಬು ಮಾತ್ರ ಭರ್ತಿಯಾಗಲಿಲ್ಲ. ಸೂರ್ಯಕಾಂತಿ ಕಡಿಮೆ ಪ್ರಮಾಣದ ಮಳೆ ಬಿದ್ದರೂ ಸಾಕಷ್ಟು ಫಸಲು ದೊರ ಕುತ್ತದೆ. ಅಂತಹ ಅವಕಾಶ ಇಲ್ಲದಂತಾಯಿತು ಎನ್ನುತ್ತಾರೆ ಬೆಳೆಗಾರರು.

ರಾಗಿ ಬೆಳೆಗೆ ಹಂಗಾಮು: ಈಚೆಗೆ ಬಿತ್ತನೆ ಮಾಡಿದ ರಾಗಿ ಮೊಳಕೆಯೊಡೆದು ಭೂಮಿ ಯಿಂದ ಮೇಲಕ್ಕೆ ಬಂದಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ರಾಗಿ ಬೆಳೆಗೆ ಮಳೆ ಹಂಗಾಮು ಆಗಿದೆ. ಹುರುಳಿ ಬಿತ್ತನೆಗೆ ಕಾಲ ಮಾನ ಆಗಿರುವುದರಿಂದ ಮಳೆ ಅನುಕೂಲವಾಗಿದೆ.

ತರಕಾರಿಗೆ ರೋಗ: ಜಮೀನಿನಲ್ಲಿ ತೇವಾಂಶ ಇರುವಂತೆ ನೀರುಣಿಸಿ ಕಾಪಾಡಿದರೂ ತರಕಾರಿ ಬೆಳೆಗಳು ರೋಗದಿಂದ ತತ್ತರಿಸುತ್ತಿವೆ. ಟೊಮೆಟೊ ಬೆಳೆಗೆ ತಗುಲಿರುವ ಅಂಗಮಾರಿ ರೋಗ ನಿಯಂತ್ರಿ ಸುವುದು ರೈತರಿಗೆ ದೊಡ್ಡ ಸವಾಲಾಗಿದೆ.

`ಸಕಾಲಕ್ಕೆ ಸಮರ್ಪಕವಾದ ಮಳೆ ಬೀಳದೆ ಇರುವುದರಿಂದ ಅವರೇ ತೊಗರಿ ಮೊದಲಾದ ದ್ವಿದಳ ಧಾನ್ಯದ ಬೆಳೆಗಳಿಗೂ ಹಾನಿಯಾಗಿದೆ.

ಬರಗಾಲದ ಪರಿಸ್ಥಿತಿ ಎದು ರಾಗಿದ್ದರಿಂದ ಜಾನುವಾರುಗಳ ಮೇವಿಗೂ ತೊಂದರೆ ಯಾಯಿತು. ಹವಮಾನದ ವೈಪರೀತ್ಯದಿಂದ ರೈತವರ್ಗ ನಷ್ಟದಲ್ಲಿ ಮುಳುಗಿದೆ. ಕೆರೆ ಕಟ್ಟೆ ತುಂಬಿಸುವಂತಹ ಉತ್ತರೆ ಮಳೆ ಸಮೃದ್ದವಾಗಿ ಸುರಿದರೆ ಮಾತ್ರ ಒಣಗುತ್ತಿರುವ ಕೆರೆ ಕಟ್ಟೆಗಳು ತುಂಬುತ್ತವೆ. ಉತ್ತರೆ ಮಳೆ ಕೈಕೊಟ್ಟರೆ ಬರಗಾಲದ ಪರಿಸ್ಥಿತಿ ಎದುರಾಗುತ್ತದೆ ಎಂಬುದು ರೈತರ ಅಭಿಪ್ರಾಯ.
ಎಚ್.ಎಸ್.ಅನಿಲ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.