ADVERTISEMENT

ರೈತರ ಹಿತಕಾಯದ ಸರ್ಕಾರ: ಚಾಮರಸ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 8:15 IST
Last Updated 9 ಜುಲೈ 2012, 8:15 IST

ಹೊಳೆನರಸೀಪುರ: ರಾಜ್ಯದ 123 ತಾಲ್ಲೂಕುಗಳಲ್ಲಿ ಬರಗಾಲ ಕಾಡುತ್ತಿದ್ದರೂ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಸರ್ಕಾರ ಖುರ್ಚಿಗಾಗಿ ಕಿತ್ತಾಡುತ್ತಿದೆ ಎಂದು ರಾಜ್ಯ ರೈತರ ಸಂಘದ ಚಾಮರಸ ಮಾಲಿ ಪಾಟೀಲ್ ಆರೋಪಿಸಿದರು.

ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಮತನಾಡಿ, ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಆದರೆ ರೈತರು ಕೊಳ್ಳುವ ಎಲ್ಲ ಪರಿಕರಗಳು, ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಎಲ್ಲದರ ದರವೂ ಗಗನಕ್ಕೇರಿದೆ. ಯಾವ ಸರ್ಕಾರವೂ ರೈತರ ಹಿತಕಾಯುವುದಿಲ್ಲ. ಆದ್ದರಿಂದ ರೈತರದೇ ಸರ್ಕಾರ ರಚಿಸುವ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕು ಎಂದರು.

ರಾಜ್ಯದ ಎಲ್ಲ ರೈತರು ಜುಲೈ 21ರಂದು ಧಾರವಾಡದಲ್ಲಿ ನಡೆಯುವ ಹುತಾತ್ಮ ರೈತರ ಗೌರವ ಸಮರ್ಪಣೆಯ ಸಮಾವೇಶದಲ್ಲಿ ಭಾಗವಹಿಸಿ. ಅಲ್ಲಿಂದಲೇ ರಾಜ್ಯ ರೈತ ಸಂಘವನ್ನು ಪುನಃಶ್ಚೇತನಗೊಳಿಸೋಣ ಎಲ್ಲರೂ ಬನ್ನಿ ಎಂದು ವಿನಂತಿಸಿದರು. ಗುಂಡುರಾವ್ ಮುಖ್ಯಮಂತ್ರಿ ಆಗಿದ್ದಾಗ ನರಗುಂದ ಮತ್ತು ನವಲಗುಂದದಲ್ಲಿ ರೈತರ ಮೇಲೆ ಗುಂಡು ಹಾರಿಸಿ ಕೊಂದರು.
 
ಪಿ.ವಿ.ನರಸಿಂಹರಾವ್ ಪ್ರಧಾನಮಂತ್ರಿ ಆಗಿದ್ದಾಗ ವಿದೇಶಿಯರಿಗೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶಕೊಟ್ಟು ರೈತರು ಭೂಮಿಯನ್ನು ಕಿತ್ತುಕೊಳ್ಳಲು ಅವಕಾಶ ಮಾಡಿಕೊಟ್ಟರು. ರೈತರು ಸಂಘಟಿತರಾಗಿ ಹೋರಾಡೋಣ. ನಮಗೂ ಒಳ್ಳೆಕಾಲ ಬಂದೇ ಬರುತ್ತೆ. ಕೊನೆ ಉಸಿರಿರುವವರೆಗೂ ಹೋರಾಡೋಣ ರೈತರಿಗೆ ನ್ಯಾಯ ಒದಗಿಸಿ ಕೊಡೋಣ ಎಂದು ಹುರಿದುಂಬಿಸಿದರು.

ಗೌರವಾಧ್ಯಕ್ಷ ಸೋನಗುದ್ದಿರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿದರು, ಜಿಲ್ಲಾ ಸಮಿತಿಯ ಲಕ್ಷ್ಮೀನಾರಾಯಣ್, ಶ್ರೀಕಂಠ ದೊಡ್ಡೇರಿ, ನಂಜುಂಡೇಗೌಡ, ಗೋಪಾಲಕೃಷ್ಣ, ಪುಟ್ಟಸ್ವಾಮಿ, ಜವರೇಶ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.