ಹಳೇಬೀಡು: ಗ್ರಾಮದೇವತೆಗಳಾದ ಉಡಸಲಮ್ಮ ಹಾಗೂ ಕಾಳಿಕಾಂಬ ಕರಿಯಮ್ಮನವರ ಜಾತ್ರಾ ಮಹೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನಡೆಯಿತು.
ಬೆಳಿಗ್ಗೆ ನಸುಕಿನಲ್ಲಿಯೇ ಕಾಳಿಕಾಂಬ ಕರಿಯಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆಗಳು ಆರಂಭವಾದವು. ದೇಗುಲ ಆವರಣದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಕೆಂಡೋತ್ಸವ ನಡೆಯಿತು.
ಹಿಂದಿನಿಂದ ನಡೆದು ಬಂದ ಇಲ್ಲಿಯ ಸಂಪ್ರದಾಯದಂತೆ ಭಕ್ತರು ಕೆಂಡ ಹಾಯುವ ಮೊದಲು ಅರ್ಚಕರು ದೇವರಿಗೆ ಕೆಂಡದ ನೈವೇದ್ಯ ಅರ್ಪಿಸಿದರು.
ನಂತರ ಕರಿಯಮ್ಮ ಹಾಗೂ ಪರಿವಾರ ದೇವತೆಗಳನ್ನು ಮಂಗಳ ವಾದ್ಯದೊಂದಿಗೆ ಉಡಸಲಮ್ಮ ದೇವಾಲಯ ಆವರಣಕ್ಕೆ ಕರೆತರಲಾ ಯಿತು. ದೇವತೆಗಳ ಸಮ್ಮುಖದಲ್ಲಿ ಉಡಸಲಮ್ಮನವರಿಗೆ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿ ಉತ್ಸವ ನಡೆಯಿತು. ಸೋಮನ ಕುಣಿತ ಹಾಗೂ ಕೆಂಚರಾಯನ ಕುಣಿತದೊಂದಿಗೆ ಕೆಲವು ಭಕ್ತರು ಡೊಳ್ಳು ಹಾಗೂ ಮಂಗಳ ವಾದ್ಯದ ಶಬ್ಧಕ್ಕೆ ಆವೇಶ ಬಂದವರಂತೆ ಹೆಜ್ಜೆ ಹಾಕಿ ಕುಣಿಯುತ್ತಿದ್ದರು.
ಮಧ್ಯಾಹ್ನ ಸಿಡಿ ನಡೆಯುವ ಸಮಯಕ್ಕೆ ಸಾವಿರಾರು ಜನರು ಮೈದಾನದಲ್ಲಿ ಜಮಾಯಿಸಿದ್ದರು. ವಂಶ ಪಾರಂಪರ್ಯ ಸಂಪ್ರದಾಯದಂತೆ ವ್ಯಕ್ತಿಯೊಬ್ಬರನ್ನು ಸಿಡಿ ಕಂಬಕ್ಕೆ ಏರಿಸಿ ಸಿಡಿ ಹಾಡಿಸಲಾಯಿತು. ನೆರೆದಿದ್ದ ಭಕ್ತರು ಸಿಡಿ ಕಂಬಕ್ಕೆ ಬಾಳೆ ಹಣ್ಣು ಎಸೆದು ಭಕ್ತಿ ಪ್ರದರ್ಶಿಸಿದರು. ನಂತರ ಪುಟ್ಟಮಕ್ಕಳನ್ನು ಸಿಡಿ ಕಂಬಕ್ಕೆ ಸ್ಪರ್ಶಿಸಿ ಮಕ್ಕಳ ಸಿಡಿ ನಡೆಸಲಾಯಿತು.
ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ದಾನಿಗಳ ನೆರವಿನಿಂದ ನಡೆದ ಪಾನಕ, ಮಜ್ಜಿಗೆ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.