ADVERTISEMENT

ಸಾಲ ನೀಡುವಲ್ಲಿ ತಾರತಮ್ಯ: ವಾಗ್ವಾದ

ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 9:38 IST
Last Updated 7 ಮಾರ್ಚ್ 2014, 9:38 IST

ಹಿರೀಸಾವೆ: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಸಾಲ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಆಡಳಿತ ಮಂಡಳಿ ಸದಸ್ಯರ ಜೊತೆ ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆದಿದೆ.

ಬೆಳಿಗ್ಗೆ ಬ್ಯಾಂಕ್‌ ಆವರಣಕ್ಕೆ ಬಂದ ಕೆಲ ರೈತರು, ‘ನಮಗೆ ಸಾಲ ಕೊಡುವಾಗ ರಾಜಕೀಯ ಮಾಡಲಾಗುತ್ತಿದೆ. ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ, ತಮಗೆ ಬೇಕಾದವರಿಗೆ ಹೆಚ್ಚು ಸಾಲ ಕೊಡುತ್ತಾರೆ’ ಎಂದು ಆರೋಪಿಸಿದರು.

ರೈತರ ಜೊತೆ ಮಾತುಕತೆಗೆ ಬಂದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಚ್.ಜಿ. ಬೋರೇಗೌಡ, ‘ನಾವು ರಾಜಕೀಯ ಮಾಡುತ್ತಿಲ್ಲ, ಜಿಲ್ಲಾ ಬ್ಯಾಂಕ್ ನೀಡಿದ ಹಣವನ್ನು ಎಲ್ಲರಿಗೂ ಸರಿಯಾಗಿ ವಿತರಿಸಿದ್ದೇವೆ’ ಎಂದರು.
 
‘ರೈತರು ದಾಖಲೆಗಳೊಂದಿಗೆ ಸಾಲ ಕೇಳಲು ಬಂದರೆ ಜನಪ್ರತಿನಿಧಿಗಳಿಂದ ಶಿಫಾರಸು ಮಾಡಿಸುವಂತೆ ಸಂಘದ ಅಧಿಕಾರಿಗಳು ಹೇಳುತ್ತಾರೆ. ಸಾಲಕ್ಕೆ ಅರ್ಜಿ ಸಲ್ಲಿಸಿದವರ ವಿವರವನ್ನು ಜನಪ್ರತಿನಿಧಿಗಳಿಗೆ ನೀಡಲಾಗುತ್ತಿದೆ. ಇದರ ಉದ್ದೇಶವೇನು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಕೆ. ರಘು ಪ್ರಶ್ನಿಸಿದರು.

ನಾವು ಯಾರಿಗೂ ಅಂಥ ಸೂಚನೆ ನೀಡಿಲ್ಲ, ಮಾಹಿತಿಯನ್ನೂ ಯಾರಿಗೂ ಕಳುಹಿಸಿಲ್ಲ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧು ನುಡಿದಾಗ ರೈತರು ಇನ್ನಷ್ಟು ಆಕ್ರೋಶಗೊಂಡರು. ‘ನೀವು ಹೇಳಿ ಕಳಿಸಿರುವ ರೈತರನ್ನೇ ಕರೆಸಿ ಸಾಕ್ಷಿ ನೀಡುತ್ತವೆ’ ಎಂದು ಗಲಾಟೆ ಮಾಡಿದರು. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರಲಿಂಗೇಗೌಡ ರೈತರನ್ನು ಸಮಧಾನ ಪಡಿಸಲು ಪ್ರಯತ್ನಿಸಿದರು.

‘ಕಳೆದ ಸಲ ಸಾಲ ನೀಡುವಾಗ ಕೆಲವು ವ್ಯತ್ಯಾಸಗಳಾಗಿವೆ. ಇನ್ನು ಮುಂದೆ ಆ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ಮಾಜಿ ಅಧ್ಯಕ್ಷ ವಿಜಯಕುಮಾರ್ ರೈತರಿಗೆ ಸಮಾಧಾನ ಹೇಳಿದರು. ಮುಂದೆಯೂ ಇದೇ ಧೋರಣೆ ತೋರಿಸಿದರೆ ಸಂಘದ ಮುಂದೆ ಪ್ರತಿಭಟನೆ ಮಾಡುವುದಾಗಿ ರೈತ ಸಂಘದ ಕಾರ್ಯಕರ್ತರಾದ ರವಿ, ತೂಬಿನಕೆರೆ ಶಂಕರ್, ಗಂಗಣ್ಣ, ಶಿವಣ್ಣಗೌಡ ಎಚ್ಚರಿಕೆ ನೀಡಿದರು.

ಎನ್‌ಎಸ್‌ಎಸ್‌ ಶಿಬಿರ
ಹಿರೀಸಾವೆ: ಹೋಬಳಿಯ ನಿಂಬೇಹಳ್ಳಿ ಗ್ರಾಮದಲ್ಲಿ ಚನ್ನರಾಯಪಟ್ಟಣದ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನ ಎನ್ಎಸ್ಎಸ್‌ ವಾರ್ಷಿಕ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ದೇವರಾಜ್ ಬುಧವಾರ ಉದ್ಘಾಟಿಸಿದರು.

ಏಳು ದಿನ ಈ ಶಿಬಿರ ನಡೆಯಲಿದೆ. ಶಾಲಾ ಆವರಣಕ್ಕೆ ತಂತಿ ಬೇಲಿ ನಿರ್ಮಾಣ, ಆರೋಗ್ಯ ತಪಾಸಣಾ ಶಿಬಿರ, ಮಳೆ ನೀರು ಸಂಗ್ರಹಣೆ, ಗ್ರಾಮ ನೈರ್ಮಲ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರಾಧಿಕಾರಿ ಪ್ರೊ.ಇ. ನಾಗಣ್ಣ ಹೇಳಿದರು. ಕಾಲೇಜಿನ ಸಿಬ್ಬಂದಿ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.