ADVERTISEMENT

`ಸಿಲಿಂಡರ್ ವಿತರಣೆಗೆ ಪರ್ಯಾಯ ವ್ಯವಸ್ಥೆ'

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 6:18 IST
Last Updated 17 ಜುಲೈ 2013, 6:18 IST

ಸಕಲೇಶಪುರ: ಕಾನೂನು ಉಲ್ಲಂಘನೆ ಆರೋಪದ ಮೇಲೆ ಶ್ರೀ ಸಿದ್ಧಿವಿನಾಯಕ ಗ್ಯಾಸ್ ಏಜೆನ್ಸಿ ವಿರುದ್ಧ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆಯಲ್ಲಿ, ತಾತ್ಕಾಲಿಕವಾಗಿ ಹಾಸನದ ನ್ಯಾಷನಲ್ ಎಲ್‌ಪಿಜಿ ಗ್ಯಾಸ್ ಏಜೆನ್ಸಿ ಮೂಲಕ ಎರಡು ದಿನಗಳ ಒಳಗೆ ಸಿಲಿಂಡರ್ ವಿರತಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕ ಡಾ.ಕಾ. ರಾಮೇಶ್ವರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಸಿದ್ಧಿವಿನಾಯಕ ಗ್ಯಾಸ್ ಏಜೆನ್ಸಿ ವಿರುದ್ಧ ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆಗಳು ದಾಖಲಾಗಿದ್ದು, ಸದರಿ ಏಜೆನ್ಸಿಯವ ಕಚೇರಿ ಹಾಗೂ ಗೋದಾಮಿಗೆ ಬೀಗ ಮುದ್ರೆ ಹಾಕಲಾಗಿದೆ. ಇದರಿಂದಾಗಿ ಕಳೆದ ಶನಿವಾರದಿಂದ ತಾಲ್ಲೂಕಿನ ಗ್ರಾಹಕರಿಗೆ ಸಿಲಿಂಡರ್‌ಗಳ ವಿತರಣೆ ಆಗದೆ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ಗ್ರಾಹಕರಿಗೆ ಸಮಸ್ಯೆ ಆಗದಂತೆ ತಕ್ಷಣ ಬದಲಿ ವ್ಯವಸ್ಥೆ ಮಾಡುವಂತೆ  ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಗ್ರಾಹಕರಿಗೆ ಸಿಲಿಂಡರ್‌ಗಳನ್ನು ವಿತರಣೆ ಮಾಡಲು ಕಚೇರಿ, ಗೋದಾಮು, ವಾಹನಗಳು ಅಗತ್ಯ ಇರುವುದರಿಂದ ಈಗಾಗಲೇ ವಶಕ್ಕೆ ತೆಗೆದುಕೊಂಡಿರುವ ಸಿದ್ಧಿವಿನಾಯಕ ಏಜೆನ್ಸಿ ಶೋ ರೂಂ, ಗೋದಾಮು ಹಾಗೂ ವಾಹನಗಳನ್ನೇ ಬಳಸಿಕೊಳ್ಳುವಂತೆ  ಇಂಡಿಯನ್ ಕಾರ್ಪೋರೇಷನ್‌ಗೆ ಸಭೆಯಲ್ಲಿ ಸೂಚಿಸಿಲಾಗಿದೆ ಎಂದರು.

ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್‌ಗಳನ್ನು ವಿತರಣೆ ಮಾಡಬೇಕು, ಕೆಲವು ಗ್ರಾಹಕರ ಮನೆ ಬಾಗಿಲಿಗೆ ವಿತರಣೆ ಮಾಡುವುದಕ್ಕೆ ಸಾಧ್ಯವಾಗದೆ ಇದ್ದರೆ, ಅಂತಹ ಗ್ರಾಹಕರಿಗೆ 416.50 ರೂಪಾಯಿ ಬದಲಿಗೆ ಸಾಗಣೆ ವೆಚ್ಚ 15 ರೂಪಾಯಿ ಕಡಿತ ಮಾಡಿ, 401.50 ರೂಪಾಯಿ ಮಾತ್ರ ಪಡೆಯಬೇಕು. ಗ್ರಾಹಕರಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಮಟ್ಟದ ಸಭೆ
ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವಂತಹ ಎಲ್ಲಾ ಎಲ್‌ಪಿಜಿ ಗ್ಯಾಸ್ ಏಜೆನ್ಸಿಯವರ ಸಭೆಯನ್ನು ಇದೇ ತಿಂಗಳ 19 ರಂದು ಸಂಜೆ ಜಿಲ್ಲಾಧಿಕಾಗಳ ಕಚೇರಿಯಲ್ಲಿ ಕರೆಯಲಾಗಿದೆ. ಸರ್ಕಾರ ನಿಗದಿಗೊಳಿಸಿರುವ ದರದಲ್ಲಿಯೇ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಬೇಕು, ಯಾವುದೇ ದೂರುಗಳು ಬಂದರೂ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.