ಚನ್ನರಾಯಪಟ್ಟಣ: ಆಯುಧ ಪೂಜೆಗೆ ಎರಡು ದಿನಗಳಿರುವಂತೆ ಪಟ್ಟಣದಲ್ಲಿ ಭಾನುವಾರದಿಂದಲೇ ಬೂದುಕುಂಬಳಕಾಯಿ ವ್ಯಾಪಾರ ಶುರುವಾಗಿದೆ.
ವಾಹನಗಳು, ಎತ್ತಿನಗಾಡಿಯಲ್ಲಿ ರೈತರು ಬೂದುಕುಂಬಳಕಾಯಿಯನ್ನು ತಂದು ಹಳೆಯ ಬಸ್ ನಿಲ್ದಾಣದ ಬಳಿ ಇರುವ ರಸ್ತೆ ಪಕ್ಕದಲ್ಲಿ ರಾಶಿ ಹಾಕಿ ಮಾರುತ್ತಿದ್ದಾರೆ. ಈಗಾಗಲೇ ಜನತೆ ಬೂದುಕುಂಬಳಕಾಯಿ ಖರೀದಿಸುವ ದೃಶ್ಯ ಸಾಮಾನ್ಯ ವಾಗಿದೆ. ವಾಹನ, ಇತರ ಆಯುಧಗಳಿಗೆ ಪೂಜೆ ಮಾಡಲು ಕುಂಬಳಕಾಯಿ ಉಪಯೋಗಿಸುವುದು ಈ ಹಬ್ಬದ ಸಂಪ್ರದಾಯ. ಇದರ ಜತೆ ವಾಹನಗಳಿಗೆ ಅಲಂಕಾರ ಮಾಡುವ ಬಣ್ಣದ ಪರಿಕರಗಳು ಸಹ ಮಾರುಕಟ್ಟೆ ಪ್ರವೇಶಿಸಿವೆ.
ಅಲ್ಲಲ್ಲಿ ಅಂಗಡಿಯನ್ನು ಹಾಕಿಕೊಂಡು ವ್ಯಾಪಾರ ಮಾಡಲಾಗುತ್ತಿದೆ. ವಿವಿಧ ಬಗೆಯ ಸಿಹಿ ತಿಂಡಿ ಮಾರಾಟವೂ ಜೋರಾಗಿದೆ. ಹಬ್ಬದ ಮುನ್ನಾ ದಿನವಾದ ಸೋಮವಾರ ವ್ಯಾಪಾರದ ಭರಾಟೆ ಜೋರಾಗಲಿದೆ.
ಅರಸೀಕೆರೆ ವರದಿ: ವಿಜಯದಶಮಿ ಮತ್ತು ಆಯುಧಪೂಜೆಗೆ ಬಳಸುವ ಬೂದು ಗುಂಬಳಕಾಯಿ ಅಧಿಕ ಪ್ರಮಾಣದಲ್ಲಿ ಪಟ್ಟಣದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ತಾಲ್ಲೂಕಿನ ಹಳ್ಳಿಗಳಿಂದ ಲಾರಿಯಲ್ಲಿ ಬೂದುಗುಂಬಳ ತಂದು ಪಟ್ಟಣದ ಮಾರುಕಟ್ಟೆ ಹಾಗೂ ಬಿ.ಎಚ್. ರಸ್ತೆಯ ಎರಡು ಬದಿಗಳಲ್ಲಿ ಇಡಲಾಗಿದೆ. ಪ್ರತಿ ಬೂದುಗುಂಬಳ ಕಾಯಿಗೆ ಅದರ ಗಾತ್ರದ ಮೇಲೆ ಬೆಲೆ ನಿಗದಿ ಮಾಡಲಾಗಿದೆ. ರೂ.10ರಿಂದ 65ರ ವರೆಗೆ ವ್ಯಾಪಾರಸ್ಥರು ಮಾರುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.