ADVERTISEMENT

ಹೆದ್ದಾರಿ ವಿಸ್ತರಣೆಗೆ ಆಗ್ರಹಿಸಿ ಬಂದ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 8:50 IST
Last Updated 17 ಜುಲೈ 2012, 8:50 IST

ಸಕಲೇಶಪುರ: ಪಟ್ಟಣದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಕ್ಷಣದಿಂದಲೇ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಕರೆಯಲಾಗಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಇದೇ ರಸ್ತೆಯಲ್ಲಿ 10 ದಿನಗಳ ಒಳಗೆ ಮಹಿಳೆ ಹಾಗೂ ನವ ವಿವಾಹಿತ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆಗೆ ಹೆದ್ದಾರಿ ವಿಸ್ತರಣೆ ಮಾಡದೆ ಇರುವುದೇ ಕಾರಣ, ಈ ರಸ್ತೆಯ ವಿಸ್ತರಣಾ ಕಾಮಗಾರಿಯನ್ನು ತಕ್ಷಣದಿಂಲೇ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿ ಬಂದ್ ಕರೆಯಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಬೆಳಿಗ್ಗೆ 1.030ರ ಸುಮಾರಿಗೆ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಕಾಂಗ್ರೆಸ್ ಮುಖಂಡ ಎಚ್.ಪಿ.ಕಾಂತ ರಾಜ್, ಪುರಸಭಾ ಅಧ್ಯಕ್ಷ ಎಚ್.ಎ.ಭಾಸ್ಕರ್, ಬಿಎಸ್‌ಪಿ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನೂರಾರು ಮಂದಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೌನ ಮೆರವಣಿಗೆ ಮಾಡುವ ಮೂಲಕ ರಸ್ತೆ ವಿಸ್ತರಣೆಗೆ ಆಗ್ರಹಿಸಿದರು.

ತಾಲ್ಲೂಕು ಕಚೇರಿ ಮುಂದೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ರಸ್ತೆ ವಿಸ್ತರಣೆಗೆ ಹಿಂದಿನಿಂದ ಎಲ್ಲರೂ ಶಾಂತಿಯುತವಾಗಿ ಹೋರಾಟ ಮಾಡಿ ಕೊಂಡು ಬರಲಾಗಿದೆ. ಭಾನುವಾರ ನಡೆದ ಅಹಿತಕರ ಘಟನೆಯಲ್ಲಿ ಮನೆಗಳ ಮೇಲೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಕೃತ್ಯವನ್ನು ಬಲವಾಗಿ ಖಂಡಿಸಲಾ ಗುತ್ತದೆ. ಗಾಂಧಿ ಮಾರ್ಗದ ಹೋರಾಟಕ್ಕೆ ಮಾತ್ರ ತಮ್ಮ ಬೆಂಬಲವಿದ್ದು, ಕಲ್ಲು ತೂರಾಟದಲ್ಲಿ ನಷ್ಟಕ್ಕೆ ಒಳಗಾದ ಅಂಗಡಿ ಹಾಗೂ ವಾಹನಗಳ ಮಾಲಿಕರು ನೀಡುವಂತಹ ದೂರಿಗೆ ಸಂಬಂಧಿಸಿದಂತೆ ಪೊಲೀಸರು ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.

ತಾಲ್ಲೂಕು ಕಾಂಗ್ರೇಸ್ ಮಾಜಿ ಅಧ್ಯಕ್ಷ ಎಚ್.ಪಿ.ಕಾಂತರಾಜ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಮಸ್ತಾರೆ ಲೋಕೇಶ್, ಮಾತನಾಡಿದರು.

ಪಟ್ಟಣದ ಪ್ರಮುಖ ಬೀದಿಗಳು ಮಾತ್ರವಲ್ಲದೆ ಬಡಾವಣೆಗಳ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಹಾಗೂ ಇತರ ವಾಹನಗಳು ಎಂದಿನಂತೆ ಸಂಚಾರ ಮಾಡುತ್ತಿದ್ದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಲಿಲ್ಲ.

ಹೊಟೆಲ್‌ಗಳನ್ನೆಲ್ಲಾ ಮುಚ್ಚಿದ್ದರಿಂದ ಪ್ರತಿಭಟನೆಗೆ ಬಂದಿದ್ದವರು, ಗ್ರಾಮೀಣ ಪ್ರದೇಶದ ಜನರು, ಪ್ರಯಾಣಿಕರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.