ADVERTISEMENT

167 ಗ್ರಾಂ ತೂಕದ ಚಿನ್ನಾಭರಣ ವಶ

ಮನೆ ಕಳ್ಳತನ, ಸುಲಿಗೆ ಪ್ರಕರಣ: ಆರು ಮಂದಿ ಬಂಧನ‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 13:31 IST
Last Updated 24 ಫೆಬ್ರುವರಿ 2021, 13:31 IST
ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣ
ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣ   

ಹಾಸನ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿಯನ್ನು ಬಂಧಿಸಿ, ಒಟ್ಟು 167 ಗ್ರಾಂ ಚಿನ್ನಾಭರಣವನ್ನು
ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣ ಹಾಗೂ ಚನ್ನರಾಯಪಟ್ಟಣ ವಿದ್ಯಾನಗರ
ಮನೆ ಕಳವು ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ
ಆರ್‌.ಶ್ರೀನಿವಾಸ್‌ ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಸನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಯಲ್ಲಗೊಂಡನಹಳ್ಳಿ ಗ್ರಾಮದಲ್ಲಿ ಫೆ.11 ರಂದು ರಾತ್ರಿ 7.30
ರಲ್ಲಿ ಒಂಟಿ ಮನೆಗೆ ನುಗ್ಗಿ ಶಾರದಮ್ಮ ಎಂಬುವರ ಹಲ್ಲೆ ನಡೆಸಿ 33 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ,
ಮೊಬೈಲ್‌ ಫೋನ್‌ ಕಿತ್ತುಕೊಂಡು ಮೂವರು ಬೈಕ್‌ನಲ್ಲಿ ಪರಾರಿಯಾಗಿದ್ದರು.

ADVERTISEMENT

ಪೊಲೀಸ್‌ ಬಾತ್ಮಿದಾರರ ಮಾಹಿತಿ ಆಧರಿಸಿ ಯಲ್ಲಗೌಡನಹಳ್ಳಿಯ ದಿಲ್ಲಿಗೌಡ (53) ಬೂವನಹಳ್ಳಿಯ ಶಶಿ (24), ಚಿತ್ರದುರ್ಗದ ತಿಪ್ಪೇಸ್ವಾಮಿ (32 ), ಕೂಡ್ಲಗಿ ತಾಲ್ಲೂಕಿನ ಬಾಷಾ (25) ಹಾಗೂ ಚಿಕ್ಕಮಗಳೂರಿನ ಧ್ರುವ ಪ್ರಸಾದ್( 21 ) ಎಂಬುವರನ್ನು ಬಂಧಿಸಿ, 33 ಗ್ರಾಂ ತೂಕದ ₹1.50 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ, ಕೃತ್ಯಕ್ಕೆ
ಬಳಸಿದ ಪಲ್ಸರ್ ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಬಂಧಿತರು ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಜೈಲಿನಲ್ಲಿರುವಾಗಲೇ ಒಬ್ಬರಿಗೊಬ್ಬರು
ಪರಿಚಿತರಾಗಿದ್ದು, ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಹಣದ ಆಸೆಗಾಗಿ ಈ ಕೃತ್ಯವೆಸಗಿರುವುದಾಗಿ ವಿಚಾರಣೆ
ವೇಳ ಒಪ್ಪಿಕೊಂಡಿದ್ದಾರೆ ಎಂದರು.

ಹಾಸನ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸುರೇಶ್, ಪಿಎಸ್‍ಐ ಬಸವರಾಜ್, ಸಿಬ್ಬಂದಿಗಳಾದ
ರವಿಕುಮಾರ್, ಕಾಂತರಾಜು, ಸುಬ್ರಮಣ್ಯ ,ದೇವರಾಜು, ಗಿರೀಶ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣದ ವಿದ್ಯಾನಗರದಲ್ಲಿ ಅ.25 ರಂದು ಮಾಜಿ ಸೈನಿಕ ಯೋಗೇಶ್ ಅವರ ಮನೆಯಿಂದ
155 ಗ್ರಾಂ ತೂಕದ ಚಿನ್ನಾಭರಣ, ₹35 ಸಾವಿರ ನಗದು ಕಳವು ಮಾಡಲಾಗಿತ್ತು. ಫೆ. 23ರಂದು
ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ವಿನೋದ್ ರಾಜ್‌ ನೇತೃತ್ವದ ತಂಡ ಗಸ್ತು ತಿರುಗುತ್ತಿದ್ದ ವೇಳೆ ಬಾಗೂರು ರಸ್ತೆಯ
ನೃಪತುಂಗ ಸರ್ಕಲ್‌ನಲ್ಲಿರುವ ಶ್ರೀಮಾತೆ ಜ್ಯೂಯಲರ್ಸ್‌ ಅಂಗಡಿ ಮುಂಭಾಗ ಅನುಮಾನಸ್ಪದವಾಗಿ ಹೊಂಚು
ಹಾಕುತ್ತಿದ್ದ ಶ್ರವಣಬೆಳಗೊಳ ಹೋಬಳಿಯ ಕಾಂತರಾಜಪುರದ ಯೋಗೇಶ್‌ ನನ್ನು ವಶಕ್ಕೆ ಪಡೆದು, ವಿಚಾರಣೆಗೆ
ಒಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ₹5.61 ಲಕ್ಷ ಮೌಲ್ಯದ
134 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಹಾಸನ ನಗರದಲ್ಲಿ ಹಲವು ರಸ್ತೆಗಳು ಕಿರಿದಾಗಿರುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ. ನಗರಸಭೆ ಈ
ಸಮಸ್ಯೆ ನಿವಾರಿಸಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಅತಿ ಹೆಚ್ಚು ವಾಣಿಜ್ಯ ವಹಿವಾಟು ನಡೆಸುವ ಬಿ.ಎಂ.
ರಸ್ತೆ, ಹಾಸನಾಂಬ ದೇವಸ್ಥಾನ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಇದೆ ಎಂದು ಎಸ್ಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.