ADVERTISEMENT

‘ಗಾಂಧಾರ ಬುದ್ಧ ವಿಹಾರದ ಅಭಿವೃದ್ಧಿಗೆ ₹ 200 ಕೋಟಿ’

ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧ: ಟ್ರಸ್ಟ್ ಅಧ್ಯಕ್ಷ ಬೋಧಿದತ್ತ ಬಂತೇಜಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:06 IST
Last Updated 11 ಅಕ್ಟೋಬರ್ 2021, 2:06 IST
ಬೇಲೂರು ತಾಲ್ಲೂಕು ಮದಘಟ್ಟ ಬಳಿಯ ಬುದ್ಧ ಗಾಂಧಾರ ವಿಹಾರದಲ್ಲಿ ಏರ್ಪಡಿಸಿದ್ದ ಗೌರವಾರ್ಪಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಲಿಂಗೇಶ್ ಉದ್ಘಾಟಿಸಿದರು. ಬಂತೇಜಿ ಬೋಧಿದತ್ತ, ಜ್ಞಾನಪ್ರಕಾಶ ಸ್ವಾಮೀಜಿ, ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ, ಶಶಿಧರ್ ಮೌರ್ಯ ಇದ್ದರು
ಬೇಲೂರು ತಾಲ್ಲೂಕು ಮದಘಟ್ಟ ಬಳಿಯ ಬುದ್ಧ ಗಾಂಧಾರ ವಿಹಾರದಲ್ಲಿ ಏರ್ಪಡಿಸಿದ್ದ ಗೌರವಾರ್ಪಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಲಿಂಗೇಶ್ ಉದ್ಘಾಟಿಸಿದರು. ಬಂತೇಜಿ ಬೋಧಿದತ್ತ, ಜ್ಞಾನಪ್ರಕಾಶ ಸ್ವಾಮೀಜಿ, ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ, ಶಶಿಧರ್ ಮೌರ್ಯ ಇದ್ದರು   

ಬೇಲೂರು: ‘ತಾಲ್ಲೂಕಿನ ಮದಘಟ್ಟ ಸಮೀಪವಿರುವ ಗಾಂಧಾರ ಬುದ್ಧ ವಿಹಾರದ ಅಭಿವೃದ್ಧಿಗೆ ₹ 200 ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಗಾಂಧಾರ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬೋಧಿದತ್ತ ಬಂತೇಜಿ ತಿಳಿಸಿದರು.

ಬುದ್ಧ ವಿಹಾರದಲ್ಲಿ ತಾಲ್ಲೂಕು ಪರಿಶಿಷ್ಟ ಜಾತಿ ವರ್ಗಗಳ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಚುನಾಯಿತ ಪ್ರತಿನಿಧಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬುದ್ಧ ವಿಹಾರದ ಸ್ಥಳದಲ್ಲಿ 108 ಅಡಿ ಭಗವಾನ್ ಬುದ್ಧರ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 2022 ರ ಜೂನ್ ತಿಂಗಳಲ್ಲಿ ಥೈಲ್ಯಾಂಡ್ ದೇಶದ ದೊರೆಯಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು. ವಿಹಾರದ ಬಳಿ ಹೈಟೆಕ್ ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಧ್ಯಾನಮಂದಿರ ಆರಂಭಿಸಲಾಗುವುದು. ಅಭಿವೃದ್ಧಿ ಕಾರ್ಯಕ್ಕೆ ಬೌದ್ಧ ಧರ್ಮೀಯರು ಹೆಚ್ಚು ಇರುವ ದೇಶದಿಂದ ಸಹಾಯಧನ ನಿರೀಕ್ಷಿಸಿದ್ದೇವೆ. ಬುದ್ಧ ಪ್ರತಿಮೆ ಜವಾಬ್ದಾರಿ ಥೈಲ್ಯಾಂಡ್ ದೇಶಕ್ಕೆ ನೀಡಲಾಗಿದೆ’ ಎಂದರು.

ಶಾಸಕ ಕೆಎಸ್.ಲಿಂಗೇಶ್ ಮಾತನಾಡಿ, ‘ಭಾಷಣದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಕೇವಲ ಹಕ್ಕುಗಳ ಬಗ್ಗೆ ಮಾತ್ರ ತಿಳಿದರೆ ಸಾಲದು, ಕರ್ತವ್ಯದ ಅರಿವೂ ಇರಬೇಕಿದೆ. ಶತ ಶತಮಾನದಿಂದ ಶೋಷಿತ ವರ್ಗದ ಮೇಲಿನ ದೌರ್ಜನ್ಯ ಇನ್ನೂ ಕಡಿಮೆಯಾಗಿಲ್ಲ. ಅಸಮಾನತೆ ಇನ್ನೂ ಜೀವಂತವಾಗಿದೆ. ಈ ನಡುವೆ ಬುದ್ಧ ವಿಹಾರ ಸ್ಥಾಪನೆ ಆಶಾದಾಯಕ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಗಾಂಧಾರ ಬುದ್ಧ ವಿಹಾರದ ಸಂಸ್ಥಾಪಕ ಅಧ್ಯಕ್ಷ ಶಶಿಧರ ಮೌರ್ಯ, ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ ಮಾತನಾಡಿದರು.

ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಜಿ. ಶಿವಮರಿಯಪ್ಪ, ಗಾಂಧಾರ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಾಜು ಅರೇಹಳ್ಳಿ, ಕೃಷಿ ಅಧಿಕಾರಿ ಪ್ರಕಾಶ್, ಸಂತೋಷಕುಮಾರ್, ಮಂಜಯ್ಯ, ರಾಜಪ್ಪ, ಧರ್ಮಪ್ಪ, ಲಕ್ಷ್ಮಿನಾರಾಯಣ, ಮಂಜುನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.