ಅರಕಲಗೂಡು: ರಾಜ್ಯಮಟ್ಟದ ಪಶುಮೇಳ ಹಾಗೂ ಸಾಧನಾ ಸಮಾವೇಶಕ್ಕೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಜ.4ರಂದು ಸಂಜೆ 4ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಮೇಳಕ್ಕಾಗಿ ಇಲ್ಲಿನ ಕ್ರೀಡಾಂಗನದಲ್ಲಿ ಬೃಹತ್ ವೇದಿಕೆ, ಪಶುಗಳು ತಂಗಲು ಸ್ಟಾಲ್ಗಳನ್ನು ನಿರ್ಮಿಸಿಲಾಗಿದೆ. ದೂರದ ಊರುಗಳಿಂದ ಕೋಣ, ಎಮ್ಮೆ, ಕುರಿ ಮುಂತಾದ ಪ್ರಾಣಿಗಳನ್ನು ತರಲಾಗಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಗೋಕಾಕ್ ಹಾಗೂ ಬೆಳಗಾವಿಯಿಂದ ಕೂಡ ಜಾನುವಾರುಗಳು ಬಂದು ತಂಗಿದ್ದವು.
ಇದೇ ಮೊದಲಬಾರಿಗೆ ಆಯೋಜಿಸಿ ರುವ ರಾಜ್ಯಮಟ್ಟದ ಪಶುಮೇಳಕ್ಕೆ ಮುಖ್ಯಂತ್ರಿಗಳು ಚಾಲನೆ ನೀಡುವರು.
ಇದಲ್ಲದೆ 34 ಕೋಟಿ ವೆಚ್ಚದಲ್ಲಿ 44 ಗ್ರಾಮಗಳ 92 ಕೆರೆಗಳಿಗೆ ಹೇಮಾವತಿ ನದಿಯಿಂದ ನೀರು ಹರಿಸುವ ಗಂಗನಾಳು ಏತನೀರಾವರಿ ಯೋಜನೆಯ ಮೊದಲ ಹಂತ, ಹೊನ್ನವಳ್ಳಿ ಸಮೀಪ ₹ 35ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ,₹ 4.2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ, ಸೆಸ್ಕ್ ಆಡಳಿತ ಕಚೇರಿ ಕಟ್ಟಡ, ರಾಮನಾಥಪುರ ತೆರಕಣಾಂಬಿ ರಸ್ತೆಯ ಸೇತುವೆ, ಹಾಸನ ಪಿರಿಯಾಪಟ್ಟಣ ರಸ್ತೆ, ಸಂತೆಮರೂರು, ವಿಜಾಪುರ ಅರಣ್ಯ ಗ್ರಾಮಗಳ ಪಶು ಚಿಕಿತ್ಸಾಲಯ, ಎಪಿಎಂಸಿ ಹರಾಜು ಮಾರುಕಟ್ಟೆಯ ನೂತನ ಕಟ್ಟಡ ಹಾಗೂ ರಸ್ತೆ, ಗೊರೂರಿನಲ್ಲಿ ಹೇಮಾವತಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಉದ್ಘಾಟನೆಯಾಗಲಿವೆ.
ಕೆಷಿಪ್ ಮೂಲಕ ನಿರ್ಮಿಸಲಿರುವ ಮಾಗಡಿ, ಸೋಮವಾರಪೇಟೆ ರಸ್ತೆ, ಬೆಂಗಳೂರು, ಜಾಲ್ಸೂರು ರಸ್ತೆಗಳಿಗೆ ಶಂಕುಸ್ಥಾಪನೆ ನಡೆಯಲಿದೆ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ನಡೆಯಲಿದೆ.
ಗಣ್ಯರಿಗೆ ಸ್ವಾಗತ ಕೋರುವ ಬ್ಯಾನರ್ ಮತ್ತು ಪ್ಲೆಕ್ಸ್ಗಳು ಪಟ್ಟಣದ ತುಂಬಾ ರಾರಾಜಿಸುತ್ತಿವೆ. ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.