ಶ್ರವಣಬೆಳಗೊಳ: ಕ್ಷೇತ್ರಕ್ಕೆ ಬಾಹು ಬಲಿಯ ಭಕ್ತರು ಆಹಾರ ಧಾನ್ಯಗಳನ್ನು ಮುಕ್ತ ಮನಸ್ಸಿನಿಂದ ದಾನ ಮಾಡುತ್ತಿ ರುವುದು ಹೆಮ್ಮೆಯ ವಿಷಯ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ವಿಂಧ್ಯಗಿರಿಯ ಬಾಹುಬಲಿ ಬೆಟ್ಟದ ಮುಂಭಾಗ ಆಹಾರ ಲಾರಿಗಳನ್ನು ಸ್ವಾಗತಿಸಿ, ಮಾತನಾಡಿದರು. ಮಹೋತ್ಸವಕ್ಕೆ ದೇಶ, ವಿದೇಶಗಳಿದ ಲಕ್ಷಾಂತರ ಭಕ್ತರು ಬರುತ್ತಾರೆ. ಅವರ ಆಹಾರದ ವ್ಯವಸ್ಥೆಗಾಗಿ ದಾನಿಗಳು ನೀಡಿದ ಭಕ್ತಿಯ ಕಾಣಿಕೆಗಳನ್ನು ಬಳಸಿ ಕೊಳ್ಳಲಾಗುವುದು ಎಂದು ತಿಳಿಸಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಲ್ಲೂರಿನ ಮಹಾವೀರ್ ಜೈನ್ ನೇತೃತ್ವದಲ್ಲಿ ಭಜಗೋಳಿ, ಮಾಳ, ರೆಂಜಾಳ, ಕಾರ್ಕಳ, ಮೂಡಬಿದ್ರೆ, ಹೊಸಮಾರು ಗ್ರಾಮಗಳಿಂದ 7 ವಾಹನಗಳಲ್ಲಿ 10 ಟನ್ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ತರಲಾಗಿದೆ.
ಧರ್ಮಸ್ಥಳ ಕ್ಷೇತ್ರದ ವತಿಯಿಂದ 10 ಟನ್ ಅಕ್ಕಿ, ಬೆಳಗಾಂ ಜಿಲ್ಲೆಯ ಗೋಕಾಕ್ ಜೈನ ಸಮಾಜದಿಂದ 5 ಟನ್ ಆಹಾರ ಧಾನ್ಯ, ಬೋರ್ಗಾಂವ್ನ ರಾವ್ಸಾಹೇಬ್ ಪಾಟೀಲ ಮತ್ತು ಸಮಾಜದವರಿಂದ 9 ಟನ್ ಎಣ್ಣೆ, ಚಿಕ್ಕೋಡಿ ತಾಲ್ಲೂಕಿನ ಜೈನ ಸಮಾಜದಿಂದ ಗೋಧಿ, ಎಣ್ಣೆ, ಬೇಳೆ ಕಾಳುಗಳು, 56 ಟನ್ ಆಹಾರ ಧಾನ್ಯ, ಮಹಾರಾಷ್ಟ್ರದ ಸಾಂಗ್ಲಿ ಸನ್ಮತಿ ಸಂಸ್ಕೃತ ಮಂಚ್ನ ಜೋಳ 2 ಟನ್, ಗೋಧಿ 3 ಟನ್, ಸಕ್ಕರೆ 4 ಟನ್, ಎಣ್ಣೆ 1.5 ಟನ್, ತುಮಕೂರು ಜಿಲ್ಲೆ ತಂಡಗ ಜೈನ ಸಮಾಜದಿಂದ 1500 ತೆಂಗಿನಕಾಯಿ ಸೇರಿ 100.5 ಟನ್ ಆಹಾರ ಧಾನ್ಯಗಳನ್ನು ಕ್ಷೇತ್ರಕ್ಕೆ ದೇಣಿಗೆ ನೀಡಲಾಗಿದೆ. ಕ್ಷೇತ್ರದ ವತಿಯಿಂದ ಕಾರ್ಕಳದ ಶಾಸಕ ಸುನಿಲ್ಕುಮಾರ್, ಪ್ರೇಮ್ಕುಮಾರ್, ಸುಭಾಷ್ಚಂದ್ರ, ಮೇಗಣ್ಣನವರ್, ರಾವ್ಸಾಹೇಬ್ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.