ಹಿರೀಸಾವೆ: ಸೇವೆಯಲ್ಲಿ ಸ್ವಾರ್ಥ ಇರದಂತೆ ಸಮಾಜ ಸೇವೆ ಮಾಡಬೇಕು ಎಂದು ಚನ್ನರಾಯಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಗಣಪತಿ ಗುರುಸಿದ್ಧ ಬಾದಾಮಿ ಶುಕ್ರವಾರ ಹೋಬಳಿಯ ಯಾಳನಹಳ್ಳಿಯಲ್ಲಿ ಹೇಳಿದರು.
ಹಿರೀಸಾವೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರದ ಹಲವು ಯೋಜನೆಗಳು ಜನಸೇವೆಗಿಂತ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸ್ವಂತ ಸೇವೆಗೆ ಉಪಯೋಗವಾಗುತ್ತಿವೆ. ಶಿಕ್ಷಕ, ರೈತ, ಸೈನಿಕ ಮತ್ತು ಯುವಕರು ದೇಶವನ್ನು ಕಟ್ಟುವಲ್ಲಿ ಪ್ರಮುಖರು. ಇವರು ತಮ್ಮ ಕರ್ತವ್ಯ ಮರೆತರೆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಕಷ್ಟಪಟ್ಟು ದುಡಿದು ಜೀವನ ನಡೆಸಿದರೆ ಉತ್ತಮ ಬದುಕು, ಆರೋಗ್ಯ ಪಡೆಯಬಹುದು’ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್. ಚಿನ್ನಸ್ವಾಮಿ ಮಾತನಾಡಿ, ‘ಮೊಬೈಲ್ ಬಳಕೆ, ಟಿವಿ ವೀಕ್ಷಣೆಗಳಿಗೆ ಇತಿ, ಮಿತಿ ಇರಲಿ. ಈಚಿನ ದಿನಗಳಲ್ಲಿ ಅಪರಾಧಗಳಲ್ಲಿ ಇವುಗಳ ಪಾತ್ರ ಹೆಚ್ಚಾಗಿದೆ’ ಎಂದು ಹೇಳಿದರು.
ಬಾಲಕಾರ್ಮಿಕ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಚನ್ನರಾಯಪಟ್ಟಣ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ಸುಂದರಾಜ್, ಸದಸ್ಯ ಮಂಜೇಶ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಎಚ್.ಎನ್. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಿರ್ದೇಶಕ ಶ್ರೀನಿವಾಸಗೌಡ, ಸಹ ನಿರ್ದೇಶಕರಾದ ಲಕ್ಷ್ಮೀಶ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.