ಆಲೂರು: ಪಂಚ ಗ್ಯಾರಂಟಿ ಯೋಜನೆಗಳನ್ನು ಶೇ 98 ಫಲಾನುಭವಿಗಳು ಪಡೆದಿದ್ದು, ಮುಂದಿನ ದಿನಗಳಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲಾಗುವುದು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವ ನಿಧಿ ಯೋಜನೆಯಡಿ ಆಲೂರು ತಾಲ್ಲೂಕು ವ್ಯಾಪ್ತಿಯಲ್ಲಿ 244 ಮಂದಿ ನೋಂದಾಯಿಸಿದ್ದು, 135 ಮಂದಿ ಲಾಭ ಪಡೆಯುತ್ತಿದ್ದಾರೆ. ಡಿಸೆಂಬರ್ನಲ್ಲಿ ₹4 ಲಕ್ಷವನ್ನು ಫಲಾನುಭವಿಗಳಿಗೆ ಸಂದಾಯ ಮಾಡಲಾಗಿದೆ ಎಂದ ಅವರು, ನೋಂದಣಿಗೆ ಕುರಿತು ಪ್ರಚಾರ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಡಿಸೆಂಬರ್ನಲ್ಲಿ 21,392 ಫಲಾನುಭವಿಗಳಿಗೆ ₹4.27 ಕೋಟಿ ಜಮೆ ಆಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಲಾಭ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ 22,606 ಅರ್ಹ ಪಡಿತರ ಚೀಟಿಗಳಿದ್ದು, ಫಲಾನುಭವಿಗಳಿಗೆ ಪ್ರತಿ ತಿಂಗಳು ₹1.15ಲಕ್ಷಕ್ಕಿಂತ ಹೆಚ್ಚು ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಕಳೆದ ತಿಂಗಳಿನಿಂದ ಒಟಿಪಿ ನಿಲ್ಲಿಸಿದ್ದು, ಒಟಿಪಿ ಸೌಲಭ್ಯ ಮತ್ತೆ ಪ್ರಾರಂಭ ಮಾಡುವಂತೆ ಸರ್ಕಾರಕ್ಕೆ ಸಮಿತಿ ಪರವಾಗಿ ಮನವಿ ಮಾಡಲಾಗುವುದು ಎಂದರು.
ಶಕ್ತಿ ಯೋಜನೆಯಡಿ ಡಿಸೆಂಬರ್ನಲ್ಲಿ 18,68,241 ಪ್ರಯಾಣಿಕರು ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು, ರಸ್ತೆ ಸಾರಿಗೆ ಸಂಸ್ಥೆಗೆ ₹53,87,524 ಆದಾಯವಾಗಿದೆ. ಗೃಹ ಜ್ಯೋತಿ ಯೋಜನೆ ಅಡಿ 23,481 ಫಲಾನುಭವಿಗಳಿಗೆ ಡಿಸೆಂಬರ್ನಲ್ಲಿ ₹72,64,518 ಮೊತ್ತ ಶೂನ್ಯ ಬಿಲ್ ನೀಡಲಾಗಿದೆ ಎಂದರು.
ನಂತರ ಯುವನಿಧಿ ಯೋಜನೆಯ ಪೋಸ್ಟರ್ ಮತ್ತು ಬ್ಯಾನರ್ ಅನ್ನು ಗ್ಯಾರಂಟಿ ಬಿಡುಗಡೆ ಮಾಡಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದಯಾನಂದ್, ಸಮಿತಿ ಸದಸ್ಯರಾದ ರುದ್ರಕುಮಾರ್, ಯೋಗೇಶ್, ಶಿವೇಗೌಡ, ಯಾಕೂಬ್, ಶಿವಪ್ಪ, ರಂಗನಾಥ್, ಹೇಮಂತ್ ಕುಮಾರ್, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಟಿ. ಮಲ್ಲೇಶ್, ಸೆಸ್ಕ್ನ ವಿದ್ಯುತ್ ತಾಂತ್ರಿಕ ಎಂಜಿನಿಯರ್ ನಾಗವೇಣಿ, ಆಹಾರ ನಿರೀಕ್ಷಕ ಮೋಹನ್ ಕುಮಾರ್, ಕೆಎಸ್ಆರ್ಟಿಸಿ ಸಂಚಾರ ನಿಯಂತ್ರಕ ಸಿದ್ದಯ್ಯ, ಕೌಶಲ ತರಬೇತಿ ಸಂಸ್ಥೆಯ ಅಧಿಕಾರಿಗಳು, ತಾಲ್ಲೂಕುಕು ಪಂಚಾಯಿತಿ ಸಿಬ್ಬಂದಿ ಅಶೋಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.