ADVERTISEMENT

ಬೆಳಗೀಹಳ್ಳಿ: ಭಕ್ತಿ– ಭಾವದ ರಂಗದ ಹಬ್ಬ

ಕಂಬದ ನರಸಿಂಹಸ್ವಾಮಿ ದೇಗುಲದಲ್ಲಿ ಒಂದು ವಾರ ವಿಶೇಷ ಆಚರಣೆ

ಹಿ.ಕೃ.ಚಂದ್ರು
Published 25 ಮಾರ್ಚ್ 2024, 7:36 IST
Last Updated 25 ಮಾರ್ಚ್ 2024, 7:36 IST
ಹಿರೀಸಾವೆ ಹೋಬಳಿಯ ಬೆಳಗೀಹಳ್ಳಿಯ ಕಂಬದ ನರಸಿಂಹಸ್ವಾಮಿ
ಹಿರೀಸಾವೆ ಹೋಬಳಿಯ ಬೆಳಗೀಹಳ್ಳಿಯ ಕಂಬದ ನರಸಿಂಹಸ್ವಾಮಿ   

ಹಿರೀಸಾವೆ: ನರಸಿಂಹಸ್ವಾಮಿಯ ಪುನರ್ಜನ್ಮದ ಕ್ಷೇತ್ರ ಎಂಬ ಪ್ರತೀತಿ ಇರುವ ಹೋಬಳಿಯ ಬೆಳಗೀಹಳ್ಳಿಯಲ್ಲಿ ಕಂಬದ ನರಸಿಂಹಸ್ವಾಮಿಯ ರಂಗದ ಹಬ್ಬವನ್ನು ಶನಿವಾರದಿಂದ ಒಂದು ವಾರ ಗ್ರಾಮದಲ್ಲಿರುವ ಎಲ್ಲ ಸಮುದಾಯದವರು ಒಟ್ಟುಗೂಡಿ ಭಯ, ಭಕ್ತಿ, ಭಾವದಿಂದ ಆಚರಿಸುತ್ತಾರೆ.

ಶನಿವಾರ (ಮಾ.23) ರಾತ್ರಿ ಬಾಳೆ ಕಂಬವನ್ನು ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಬ್ಬ ಮುಗಿಯುವವರೆಗೆ ದೇವರು ಮೆರವಣಿಗೆ ಮಾಡುವ ಬೀದಿಗಳು ಮತ್ತು ರಂಗ ಮಂಟಪದ ಸುತ್ತ ಪಾದರಕ್ಷೆ ಹಾಕಿಕೊಂಡು ತಿರುಗುವಂತಿಲ್ಲ. ಗ್ರಾಮದಲ್ಲಿ ಮಾಂಸಾಹಾರವನ್ನು ಮಾಡುವುದಿಲ್ಲ. ಹಬ್ಬ ಮುಗಿಯುವರೆಗೆ ಗ್ರಾಮಸ್ಥರು ಸೇವಿಸುವುದಿಲ್ಲ.

ನಿತ್ಯ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜನಪದ ನೃತ್ಯವಾದ ರಂಗದ ಕುಣಿತವನ್ನು ಕುಣಿಯುತ್ತಾರೆ.

ADVERTISEMENT

ಮಾ.29ರಂದು ಜಾಗರಣೆ ಪ್ರಯುಕ್ತ ದಮ್ಮನಿಂಗಳ, ಹಡೇನಹಳ್ಳಿ, ನಾಗಯ್ಯನಕೊಪ್ಪಲು, ಎಚ್.ಚಿಕ್ಕೋನಹಳ್ಳಿ, ಹೊನ್ನೇನಹಳ್ಳಿ, ಹಿರೀಸಾವೆ ಮತ್ತು ತುರುವೇಕೆರೆ ತಾಲ್ಲೂಕಿನ ಹೊಡಿಕೆಘಟ್ಟ ಸೇರಿದಂತೆ ಹಲವು ಗ್ರಾಮಗಳಿಂದ ಜನರು ಬಂದು ರಂಗ ಕುಣಿಯುತ್ತಾರೆ.

ಹಬ್ಬದ ಪ್ರಯುಕ್ತ ಮಾ.30ರಂದು ಮಧ್ಯಾಹ್ನ 2 ಗಂಟೆಗೆ ಕೆರೆಯ ಪಕ್ಕದಲ್ಲಿರುವ ಅಶ್ವತ್ಥ ವೃಕ್ಷದ ಬಳಿ ಗಂಗಾ ಪೂಜೆ ನೆರವೇರಿಸಿ, ಮಂಡೆ ಮತ್ತು ಬಾಯಿ ಬೀಗದ ಹರಕೆ ಸಲ್ಲಿಸುತ್ತಾರೆ. ಸಂಜೆ 8 ಗಂಟೆಗೆ ಸ್ವಾಮಿಯವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ನಂತರ ಮೂಡ್ಲಿಗಿರಿಯಪ್ಪನ ಹರಿಸೇವೆ ನಡೆಯುತ್ತದೆ.

ಭಕ್ತರು ಮತ್ತು ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನದ ಆವರಣದಲ್ಲಿ ಸಾಮೂಹಿಕವಾಗಿ ಅಡುಗೆಯನ್ನು ತಯಾರಿಸಿ, 101 ಎಡೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ದೇವರ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಮಧ್ಯರಾತ್ರಿ ಅನ್ನದಾನ ಮಾಡುವುದು ಹಬ್ಬದ ವಿಶೇಷವಾಗಿದೆ.

ಹಿರೀಸಾವೆ ಹೋಬಳಿಯ ಬೆಳಗೀಹಳ್ಳಿಯ ಕಂಬದ ನರಸಿಂಹಸ್ವಾಮಿ ದೇವಸ್ಥಾನ
ಬೆಳಗೀಹಳ್ಳಿ ಹಬ್ಬದಲ್ಲಿ ಸ್ವಾಮಿಯ ಉತ್ಸವದಲ್ಲಿ ಬಸವಣ್ಣನ ಮೆರವಣಿಗೆ (ಸಂಗ್ರಹ ಚಿತ್ರ)
40 ಗ್ರಾಮದಲ್ಲಿ ವಾಸ ಇರುವ ಸ್ವಾಮಿಯ ಭಕ್ತರು ಹಬ್ಬದಲ್ಲಿ ಭಾಗಿಯಾಗಿ ಧಾರ್ಮಿಕ ಆಚರಣೆಗೆ ಸಹಕರಿಸುತ್ತಾರೆ
ದೇವರಾಜು ದೇವಸ್ಥಾನದ ಗುಡಿಗೌಡರು ಬೆಳಗೀಹಳ್ಳಿ
ಗ್ರಾಮ ಮತ್ತು ದೇವಸ್ಥಾನದ ಹಿನ್ನೆಲೆ
ಮಂಡ್ಯ ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಕ್ಯಾತನಹಳ್ಳಿಯ ಅರ್ಚಕರು ಗೋವುಗಳನ್ನು ಸಾಕಿದ್ದರು. ಅವುಗಳನ್ನು ಈ ಸ್ಥಳದಲ್ಲಿ ಮೇಯಿಸುತ್ತಿದ್ದರು. ಒಂದು ಬಿಳಿ ಹಸು ಸಂಜೆ ಸಮಯದಲ್ಲಿ ದನಗಳಿಂದ ದೂರ ಹೋಗಿ ಹುತ್ತ ಒಂದರ ಮೇಲೆ ನಿಂತು ಹಾಲನ್ನು ಅದರೊಳಕ್ಕೆ ಸುರಿಸುತ್ತಿತ್ತು. ಈ ದೃಶ್ಯವನ್ನು ನೋಡಿದ ದನ ಕಾಯುವವನು ಮನೆಯವರಿಗೆ ತಿಳಿಸಿದ. ಇದೇ ರೀತಿಯ ಕನಸು ಸಹ ಆದೇ ದಿನ ಹಸುವಿನ ಮಾಲೀಕರಿಗೆ ಬಿತ್ತು. ಮರುದಿನ ಈ ಜಾಗಕ್ಕೆ ಬಂದು ಸಂಜೆಯಿಂದ ಹುತ್ತದ ಸುತ್ತ ಬಿದ್ದಿದ್ದ ತರಗನ್ನು (ಮರದ ಒಣಗಿದ ಎಲೆಗಳು) ಸ್ವಚ್ಛ ಮಾಡಿ ಬೆಳಗಿನ ಜಾವದ ಸಮಯಕ್ಕೆ ಸಣ್ಣ ದೇವಸ್ಥಾನ ನಿರ್ಮಾಣ ಮಾಡಿದರು. ಬೆಳಗಿನ ಬೆಳಕಿಗೆ ಬಂದ ಗ್ರಾಮವೇ ‘ಬೆಳಗೀಹಳ್ಳಿ’ ಮತ್ತು ಶಾಸನಗಳ ಪ್ರಕಾರ ಜೈನ ಧರ್ಮದ ಗ್ರಾಮ ಎಂಬ ಐತಿಹ್ಯವಿದೆ ಎಂದು ಗ್ರಾಮದ ಶಿಕ್ಷಕ ಗೋವಿಂದಯ್ಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.