
ಪುಷ್ಪಾ ಅರುಣ್ಕುಮಾರ್
ಹಾಸನ: ಚಲನಚಿತ್ರ ನಿರ್ಮಾಪಕಿ, ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಅವರು ಅತಿಕ್ರಮಣ ಮಾಡಿ, ಹಾಸನದ ವಿದ್ಯಾನಗರದ ಅವರ ನಿವಾಸದ ಪಕ್ಕದ ಜಾಗದಲ್ಲಿ ನಿರ್ಮಿಸಿದ್ದರು ಎನ್ನಲಾದ ಕಾಂಪೌಂಡ್ ಅನ್ನು ಭೂಮಾಲೀಕ ದೇವರಾಜು ಅವರು ಭಾನುವಾರ ತೆರವುಗೊಳಿಸಿದ್ದಾರೆ.
‘ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ಬಂದಿದ್ದು, ಆ ಪ್ರಕಾರ ಅತಿಕ್ರಮಣ ತೆರವು ಮಾಡಲಾಗಿದೆ’ ಎಂದು ದೇವರಾಜು ತಿಳಿಸಿದ್ದಾರೆ.
ಪುಷ್ಪಾ ಅವರ ನಿವಾಸದ ಪಕ್ಕದಲ್ಲಿ ಲಕ್ಷ್ಮಮ್ಮ ಎಂಬವರಿಗೆ ಸೇರಿದ್ದ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದರು ಎಂದು ಆರೋಪಿಸಲಾಗಿತ್ತು. ಲಕ್ಷ್ಮಮ್ಮ ಅವರು ಈ ಜಾಗವನ್ನು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಹೋಲ್ಡರ್ ಆಗಿ ದೇವರಾಜು ಅವರಿಗೆ ಬರೆದುಕೊಟ್ಟಿದ್ದರು. ಪುಷ್ಪಾ ಅವರು ಕಾಂಪೌಂಡ್ ಹಾಕಿದ್ದ ದಿನವೇ ದೇವರಾಜು ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಒಂದೂವರೆ ಸಾವಿರ ಅಡಿ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದಾರೆ ಎಂದು ದೂರಿದ್ದರು.
‘ಪುಷ್ಪಾ ಅವರು ಕೋರ್ಟ್ಗೆ ಸೂಕ್ತ ದಾಖಲಾತಿ ಒದಗಿಸಿಲ್ಲ. ನಮ್ಮ ಪರ ತೀರ್ಪು ಬಂದಿದ್ದು, ನ್ಯಾಯಾಲಯದ ಅನುಮತಿಯಂತೆ ಕಾಂಪೌಂಡ್ ತೆರವುಗೊಳಿಸಿದ್ದೇವೆ’ ಎಂದು ದೇವರಾಜು ಹೇಳಿದ್ದಾರೆ.
‘ಯಶ್ ಹೆಸರು ಹೇಳಿಕೊಂಡು ಕೆಲವರು ಮೈಲೇಜ್ ತೆಗೆದುಕೊಳ್ಳಲು ನೋಡುತ್ತಿದ್ದಾರೆ. ನ್ಯಾಯಾಲಯದ ಆದೇಶ ಗಮನಕ್ಕೆ ತಂದಿಲ್ಲ. ಕಾನೂನು ಹೋರಾಟ ಮಾಡುತ್ತೇನೆ’ ಎಂದು ಪುಷ್ಪಾ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.