ADVERTISEMENT

ಶಾಲಾ ಮಕ್ಕಳಿಗೆ ಜೋಳ, ರಾಗಿ ನಿರಾಕರಣೆ: ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 13:33 IST
Last Updated 30 ಜುಲೈ 2023, 13:33 IST
 ಜೋಳ
ಜೋಳ   

ಹಾಸನ: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಊಟದಲ್ಲಿ ರಾಗಿ ಮತ್ತು ಜೋಳವನ್ನು ನಿರಾಕರಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಎಐಡಿಎಸ್‌ಒ ಖಂಡಿಸಿದೆ.

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿರಿಧಾನ್ಯವನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯ ಮೇರೆಗೆ ಕರ್ನಾಟಕ ಸರ್ಕಾರವು ರಾಜ್ಯದ ಮಕ್ಕಳಿಗೆ ರಾಗಿ ಮತ್ತು ಜೋಳದ ಆಹಾರವನ್ನು ಒದಗಿಸಲು ನಿರ್ಧರಿಸಿತ್ತು. ಆದರೆ ಈ ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಹಾರ ಸರಬರಾಜು ನಿಗಮವು ತಿರಸ್ಕರಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸುವುದಾಗಿದೆ ಎಐಡಿಎಸ್ಓ ಹಾಸನ ಜಿಲ್ಲಾ ಸಹ ಸಂಚಾಲಕಿ ಚೈತ್ರಾ ತಿಳಿಸಿದ್ದಾರೆ.

ಪ್ರಸ್ತಾವಿತ ರಾಗಿ ಮತ್ತು ಜೋಳವನ್ನು ನೀಡದೇ ಅಕ್ಕಿಯ ಪೂರೈಕೆಯನ್ನೇ ಮುಂದುವರಿಸಲಾಗುತ್ತಿದೆ. ಈಗಾಗಲೇ ದೇಶವ್ಯಾಪಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿವೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಪರಿಸ್ಥಿತಿಯು ಗಂಭೀರವಾಗಿದ್ದು, 107ನೇ ಸ್ಥಾನದಲ್ಲಿದೆ ಎಂದಿದ್ದಾರೆ.

ADVERTISEMENT

ಪರಿಸ್ಥಿತಿಯು ಹೀಗಿರುವಾಗ ಸಿರಿಧಾನ್ಯಗಳ ಪೂರೈಕೆ ಮಕ್ಕಳ ಪೌಷ್ಟಿಕತೆ ವೃದ್ಧಿಗೆ ಸಹಕಾರಿಯಾಗುತ್ತದೆ. ಪ್ರಾದೇಶಿಕ ಆಹಾರ ಪದ್ಧತಿಯು ಮಕ್ಕಳ ಬೆಳವಣಿಗೆಗೆ ಪೂರಕವಾಗುತ್ತದೆ. ಲಕ್ಷಾಂತರ ಮಕ್ಕಳು ತಮ್ಮ ದೈನಂದಿನ ಪೌಷ್ಟಿಕಾಂಶಕ್ಕಾಗಿ ಬಿಸಿಯೂಟವನ್ನು ಅವಲಂಬಿಸಿದ್ದಾರೆ. ಇಂತಹ ಗಂಭೀರ ವಿಷಯದಲ್ಲಿ ಕೇಂದ್ರ ಸರ್ಕಾರವು ಯಾವುದೇ ರೀತಿಯ ರಾಜಕೀಯಕ್ಕೆ ಅವಕಾಶ ನೀಡದೇ ಅವಶ್ಯಕತೆಗೆ ತಕ್ಕಂತೆ ಧಾನ್ಯಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.