ಬೇಲೂರು: ಇಲ್ಲಿನ ಜೂನಿಯರ್ ಕಾಲೇಜಿನ ಕೊಠಡಿ ಬಾಗಿಲು ಮುರಿದು ಒಳನುಗ್ಗಿರುವ ಯುವಕನೊಬ್ಬ ಕುಡಿದು ಮಲಗಿದ್ದಾನೆ.
ಕಾಲೇಜಿನ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ಕಾಲೇಜಿಗೆ ಬಂದಾಗ ಪ್ರೌಢಶಾಲಾ ವಿಭಾಗದ ಕೊಠಡಿಯ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಒಳಗೆ ಹೋಗಿ ನೋಡಿದಾಗ, ಯುವಕನೊಬ್ಬ ಮದ್ಯ ಸೇವಿಸಿ ವಿದ್ಯಾರ್ಥಿಗಳು ಕೂರುವ ಡೆಸ್ಕ್ ಮೇಲೆ ಮಲಗಿದ್ದಾನೆ. ಪಕ್ಕದಲ್ಲೇ ಮದ್ಯದ ಬಾಟಲಿ ಹಾಗೂ ತಿಂದಿದ್ದ ಊಟದ ಪೊಟ್ಟಣ ಇತ್ತು. ಪ್ರಾಂಶುಪಾಲರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು, ಮಲಗಿದ್ದ ಯುವಕನನ್ನು ಎಚ್ಚರಿಸಿ ವಿಚಾರಿಸಿದರು. ಬಾಗಲಕೋಟೆಯ ರಾಹುಲ್ (20) ಎಂದು ತನ್ನ ಹೆಸರು ಹೇಳಿದ್ದಾನೆ.
‘ಸ್ನೇಹಿತರನ್ನು ಮಾತನಾಡಿಸಲು ಇಲ್ಲಿಗೆ ಬಂದಿದ್ದೇನೆ. ರಾತ್ರಿ ಪಕ್ಕದ ಪಾರ್ಕ್ನಲ್ಲಿ ಮಲಗಿ ಬೆಳಿಗ್ಗೆ ಕಾಲೇಜು ಕೊಠಡಿಯೊಳಗೆ ಬಂದು ಮಲಗಿದ್ದೇನೆ’ ಎಂದು ತಿಳಿಸಿದ್ದಾನೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.
‘ಇದು ಹಳೆಯ ಕಾಲೇಜಾಗಿದ್ದು, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಕಾಲೇಜಿನಲ್ಲಿ ಕಾವಲುಗಾರ ಮತ್ತು ಅಟೆಂಡರ್ ಇಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಕಾವಲುಗಾರರನ್ನು ನೇಮಿಸಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು’ ಎಂದುಕಾಲೇಜಿನ ಪ್ರಾಂಶುಪಾಲ ಗೋಪಾಲ್, ಉಪ ಪ್ರಾಂಶುಪಾಲ ಚಂದ್ರಶೇಖರಪ್ಪ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.