
ಕೊಣನೂರು: ತಂಬಾಕು ಬೆಲೆ ಕುಸಿದಿರುವ ಕುರಿತು ಶೀಘ್ರದಲ್ಲಿ ಸಭೆ ನಡೆಸಿ ತಂಬಾಕು ಬೆಳೆಗಾರರ ಹಿತ ಕಾಪಾಡುವಂತೆ ರೈತ ಸಂಘದ ಅಧ್ಯಕ್ಷ ಎಚ್.ಎಸ್ ಭುವನೇಶ್ ನೇತೃತ್ವದಲ್ಲಿ ರೈತ ಸಂಘಟನೆ ಕಾರ್ಯಕರ್ತರು ಮಾರುಕಟ್ಟೆ ಅಧೀಕ್ಷಕಿ ಸವಿತಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ನಂಜುಡಸ್ವಾಮಿ ಬಣದ ಅಧ್ಯಕ್ಷ) ಎಚ್.ಎಸ್ ಭುವನೇಶ್ ನೇತೃತ್ವದಲ್ಲಿ ರೈತ ಸಂಘಟನೆ ಕಾರ್ಯಕರ್ತರು, ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಕೇಂದ್ರ ಬಜೆಟ್ ಮಂಡನೆ ನಂತರ ತಂಬಾಕು ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತಗೊಡಿರುವುದನ್ನು ವಿರೋಧಿಸಿದರು.
‘ಈ ಹಿಂದೆ ಪ್ರತಿ ಕೆ.ಜಿ ತಂಬಾಕಿಗೆ ಸರಾಸರಿ ₹320ರಷ್ಟಿದ್ದ ಬೆಲೆ, ಪ್ರಸ್ತುತ ₹240 ರಿಂದ ₹260ಕ್ಕೆ ಕುಸಿದಿದೆ. ಇದರಿಂದ ಬೆಳೆಗಾರರು ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಶಾಸಕರು, ಸಂಸದರು, ವರ್ತಕರು ಮತ್ತು ರೈತ ಮುಖಂಡರ ಸಮ್ಮುಖದಲ್ಲಿ ತುರ್ತು ಸಭೆ ನಡೆಸಬೇಕು’ ಎಂದು ರೈತ ಸಂಘದವರು ಒತ್ತಾಯಿಸಿದರು. ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕರು ಈ ವಿಚಾರವಾಗಿ ಗಮನ ಹರಿಸಿ, ಬರುವ ಸದ್ಯದಲ್ಲೇ ಬೆಲೆ ಕುಸಿತದ ಕುರಿತು ಚರ್ಚಿಸಲು ಸಭೆ ಕರೆಯಬೇಕೆಂದು ಸಂಘವು ಮನವಿಯಲ್ಲಿ ತಿಳಿಸಿದೆ. ಕೇಂದ್ರ ಬಜೆಟ್ ನಂತರ ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಬೆಲೆ ಕುಸಿದಿರುವುದು ರೈತರ ಆಸಮಾಧನಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯೋಚಿತ ಬೆಲೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.