
ಅರಸೀಕೆರೆ: ರಾಸಾಯನಿಕ ಮುಕ್ತ ಆಹಾರ ಉತ್ಪಾದಿಸುವಲ್ಲಿ ಹಾಗೂ ರೋಗ ಮುಕ್ತ ಜೀವನ ಸಾಗಿಸುವಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಕುಮಾರ್ ಹೇಳಿದರು.
ನಗರದ ಮಿನಿ ವಿಧಾನಸೌಧದ ಸಮೀಪದ ತಮ್ಮ ಕಾರ್ಯಾಲಯದಲ್ಲಿ ನೂತನ ಓಂ ಶ್ರೀ ಶಿವಶಕ್ತಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಳುವರಿ, ಆದಾಯದ ಹೆಸರಿನಲ್ಲಿ ರೈತನಿಗೆ ಯಾವುದು ಅರ್ಥವಾಗದಂತೆ ಮಾಡಿ ಕೀಟನಾಶಕ, ರಾಸಾಯನಿಕ ಗೊಬ್ಬರ, ಹೈಬ್ರಿಡ್ ಬಿತ್ತನೆ ಬೀಜ ಕೊಟ್ಟು ಕೃಷಿ ಮಾಡಿಸುತ್ತಿದ್ದೇವೆ. ಇದರಿಂದ ಇಡೀ ಆಹಾರ ಉತ್ಪಾದನಾ ವ್ಯವಸ್ಥೆಯೇ ಕಲುಷಿತವಾಗಿದೆ. ಅರಸೀಕೆರೆ ತಾಲ್ಲೂಕನ್ನು ರಾಸಾಯನಿಕ ಮುಕ್ತ ಹಾಗೂ ರೋಗಮುಕ್ತವನ್ನಾಗಿಸಲು ರೈತರಿಗೆ ಸಂಪೂರ್ಣ ಸಹಾಯ ಮಾಡಲು ಈ ಬ್ಯಾಂಕ್ ಆರಂಭಿಸಲಾಗಿದೆ ಎಂದರು.
ಆಹಾರ ಹಾಗೂ ಆರೋಗ್ಯ ಅಡುಗೆ ಮನೆಯಲ್ಲಿದೆ ಎಂಬಂತೆ ಪ್ರಮುಖವಾಗಿ, ರೈತರ ಹೊಲ ಗದ್ದೆಗಳು ರಾಸಾಯನಿಕ ಮುಕ್ತವಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಂದಿನ ದಿನಮಾನಗಳಲ್ಲಿ ರೈತರ ಬಗ್ಗೆ ಇರುವ ನಿಕೃಷ್ಟ ಮನೋಭಾವ ದೂರವಾಗಬೇಕು ಎಂದರು.
ಬಗರ್ಹುಕುಂ ಒಂದು ಪ್ರಮುಖ ಸಮಸ್ಯೆಯಾಗಿದೆ. ಭೂ ರಹಿತ ಕುಟುಂಬಗಳು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕುಪತ್ರ ಸಿಗದಂತಾಗಿದೆ. ಅರಣ್ಯ - ಕಂದಾಯ ಇಲಾಖೆಗಳ ಗೊಂದಲದಿಂದಾಗಿ ಒಕ್ಕಲೆಬ್ಬಿಸುವ ಭೀತಿಯಲ್ಲಿ ಬದುಕುತ್ತಿವೆ. ಅರಸೀಕೆರೆ ಕ್ಷೇತ್ರದಲ್ಲೂ ಸಮಸ್ಯೆಯಾಗಿದ್ದು, ಬಗೆಹರಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಕೃಷಿ ,ಪರಿಸರ ಮತ್ತು ಆಹಾರ ತಜ್ಞ ವಿಜಯ್ ಅಂಗಡಿ, ಕೃಷಿ, ಆಹಾರ ಹಾಗೂ ಪರಿಸರದ ಬಗ್ಗೆ ಮಾತನಾಡಿದರು. ಹಾಸನ ವಿಭಾಗದ ಸಹಕಾರ ಸಂಘದ ಕಾರ್ಯನಿರ್ವಾಹಕ ಅಶೋಕ್, ಓಂ ಶ್ರೀ ಶಿವಶಕ್ತಿ ಸೌಹರ್ದಾ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಷೇರುದಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.