ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಹೊಳೆನರಸೀಪುರ: ಪಟ್ಟಣದ ಅರಕಲಗೂಡು ರಸ್ತೆಯ ಆರ್ಆರ್ಆರ್ ಡಾಬಾ ಮಾಲೀಕ, ಪುರಸಭಾ ಸದಸ್ಯ ಕಿರಣ್ ಅವರ ಮೇಲೆ ಕೆಲವರು ತೀವ್ರವಾಗಿ ಹಲ್ಲೆ ನಡೆಸಿದ್ದು, ಕಣ್ಣು ಮತ್ತು ಕೈಗೆ ತೀವ್ರ ಪೆಟ್ಟಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಭಾನುವಾರ ಸಂಜೆ ವೇಳೆ ನಾನು ಹೋಟೆಲ್ನಲ್ಲಿದ್ದಾಗ ಅಜಿತ್ ಹಾಗೂ ಸಾರಿಗೆ ಸಂಸ್ಥೆ ಚಾಲಕ ಮನೋಹರ್ ಹಾಗೂ ಇನ್ನಿಬ್ಬರು ನಮ್ಮ ಡಾಬಾಗೆ ಊಟಕ್ಕೆ ಬಂದರು. ಬಂದವರು ನನ್ನನ್ನು ಏಕವಚನದಿಂದ ಮಾತನಾಡಿಸುತ್ತಿದ್ದರು. ಈ ಬಗ್ಗೆ ಕೇಳಿದ್ದಕ್ಕೆ ತೀವ್ರವಾಗಿ ಹಲ್ಲೆ ನಡೆಸಿದರು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಹಲ್ಲೆ ನಡೆಸಿದವರ ವಿರುದ್ದ 307 ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಿದ್ದಾರೆ.
‘ಪಟ್ಟಣದಲ್ಲಿ ಇತ್ತೀಚೆಗೆ ಕೆಲವರ ಗೂಂಡಾಗಿರಿ ಹೆಚ್ಚಾಗಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಕೆಲವು ಪುಂಡರು ಕರ್ಕಶವಾಗಿ ಹಾರ್ನ್ ಮಾಡುತ್ತಾ ಆತಂಕ ಸೃಷ್ಟಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.