ADVERTISEMENT

ಆರೋಗ್ಯ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ

ನಗರದಲ್ಲಿ ಜಾಗೃತಿ ಜಾಥಾ ನಡೆಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 13:55 IST
Last Updated 25 ಅಕ್ಟೋಬರ್ 2019, 13:55 IST
ಹಾಸನದಲ್ಲಿ ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.
ಹಾಸನದಲ್ಲಿ ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.   

ಹಾಸನ: ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ಲಭ್ಯವಿದ್ದು, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಬಹುಬೇಡಿಕೆಯ ಚಿಕಿತ್ಸಾ ಪದ್ಧತಿಯಾಗಿ ಹೊರಹೊಮ್ಮುತ್ತಿದೆ ಎಂದು ರಾಜೀವ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವಿ. ರಾಜೀವ್ ತಿಳಿಸಿದರು.

ನಗರದ ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ರಾಜೀವ್ ನರ್ಸಿಂಗ್ ಕಾಲೇಜು, ರತ್ನ ನರ್ಸಿಂಗ್ ಕಾಲೇಜು, ರಾಜೀವ್ ಪ್ಯಾರಾ ಮೆಡಿಕಲ್ ಕಾಲೇಜುಗಳ ಸಹಯೋಗದೊಂದಿಗೆ ವಿಶ್ವ ಆಯುರ್ವೇದ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಆಯುರ್ವೇದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲಾ ಚಿಕಿತ್ಸಾ ಪದ್ಧತಿಗಳು ರೋಗ ಬಾರದಂತೆ ತಡೆಗಟ್ಟುವ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿವೆ. ಆದರೆ, ಆಯುರ್ವೇದ ವೈದ್ಯ ಪದ್ಧತಿಯು ಇದನ್ನೇ ಮೂಲ ತತ್ವವಾಗಿಸಿಕೊಂಡು ಜನರ ದೀರ್ಘಾಯುಷ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿದೆ. ಸಂಶೋಧನೆಗಳು ತ್ವರಿತಗತಿಯಲ್ಲಿ ನಡೆದಲ್ಲಿ ಹೆಚ್ಚಿನ ಪ್ರಖ್ಯಾತಿ ಪಡೆದುಕೊಳ್ಳುತ್ತದೆ ಎಂದು ಹೇಳಿದರು.

ಪ್ರಾಂಶುಪಾಲ ಡಾ. ಎಸ್.ಎ. ನಿತಿನ್ ಮಾತನಾಡಿ, ವಿಶ್ವದ ಸುಮಾರು 25 ರಾಷ್ಟ್ರಗಳು ಆಯುರ್ವೇದ ದಿನಾಚರಣೆಗೆ ಸಹಕಾರ ನೀಡುತ್ತಿರುವುದು ಭಾರತದ ಮಟ್ಟಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ರಾಜೀವ್ ಶಿಕ್ಷಣ ಮಹಾವಿದ್ಯಾಲಯದ ನಿರ್ದೇಶಕ ಡಿ.ಎಸ್. ಸುಧೀಶ್, ರಾಜೀವ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಜೆಸಿಂತ, ರತ್ನ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಸೆಲ್ವಿ ಹಾಜರಿದ್ದರು.

ಆಯುರ್ವೇದ ಚಿಕಿತ್ಸಾ ಪದ್ಧತಿ ಬಿಂಬಿಸುವ ಸ್ತಬ್ಧಚಿತ್ರದೊಂದಿಗೆ ಸುಮಾರು 800 ವಿದ್ಯಾರ್ಥಿಗಳು ಜಾಥಾ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.