ADVERTISEMENT

ಹೊಳೆನರಸೀಪುರ: ಆಸ್ಪತ್ರೆಯಲ್ಲಿ 40 ಗರ್ಭಿಣಿಯರಿಗೆ ಸೀಮಂತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 14:33 IST
Last Updated 9 ಜನವರಿ 2024, 14:33 IST
ಹೊಳೆನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಸುರಕ್ಷಾ ಮಾತೃ ಅಭಿಯಾನ ಯೋಜನೆಯಡಿ ಗರ್ಭಿಣಿಯರಿಗೆ ಸೀಮಂತ ಮಾಡಿ ಶುಭಹಾರೈಸಿದರು. ಡಾ. ಧನಶೇಖರ್, ಡಾ. ರಾಜೇಶ್, ಡಾ.ಲೋಕೇಶ್, ಡಾ. ರೇಖಾ, ಭಾನುಶ್ರೀ, ಇತರರು ಭಾಗವಹಿಸಿದ್ದರು. 
ಹೊಳೆನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಸುರಕ್ಷಾ ಮಾತೃ ಅಭಿಯಾನ ಯೋಜನೆಯಡಿ ಗರ್ಭಿಣಿಯರಿಗೆ ಸೀಮಂತ ಮಾಡಿ ಶುಭಹಾರೈಸಿದರು. ಡಾ. ಧನಶೇಖರ್, ಡಾ. ರಾಜೇಶ್, ಡಾ.ಲೋಕೇಶ್, ಡಾ. ರೇಖಾ, ಭಾನುಶ್ರೀ, ಇತರರು ಭಾಗವಹಿಸಿದ್ದರು.    

ಹೊಳೆನರಸೀಪುರ: ಗರ್ಭಿಣಿ ಆದಾಗ ಬೇಕಾದ ಎಚ್ಚರಿಕೆ ಕ್ರಮಗಳು, ಆಹಾರ, ಶಿಶುವಿನ ಬೆಳವಣಿಗೆ ಗಮನಿಸುವ ಬಗ್ಗೆ ಸಲಹೆ ಸೂಚನೆ ನೀಡಲು ರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಮಂತಮಾಡಿ ಅವರಿಗೆ ಮಾರ್ಗದರ್ಶನ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನ್‍ಶೇಖರ್ ಪ್ರಶಂಶಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಐಸಿಟಿಸಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸೀಮಂತದಲ್ಲಿ ಅವರು ಮಾತನಾಡಿದರು. ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ತಪ್ಪಿಸಲು ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಸುರಕ್ಷಾ ಮಾತೃ ಅಭಿಯಾನ’ ನಡೆಸುತ್ತಿದೆ ಎಂದರು.

ಸೀಮಂತ ಕಾರ್ಯಕ್ರಮ ಗರ್ಭಿಣಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಆಗಾಗ್ಗೆ ವೈದ್ಯರ ಸಲಹೆ ಪಡೆದು, ಮಾರ್ಗದರ್ಶನವನ್ನು ಪಾಲನೆ ಮಾಡಿದರೆ ತಾಯಿ ಹಾಗೂ ಜನಿಸುವ ಮಗು ಆರೋಗ್ಯ ವಾಗಿರುತ್ತದೆ. ಬಿಪಿ,ಶುಗರ್ ಇತರ ಸೋಂಕು ತಡೆಯಲು ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಂಡರೆ ಸುರಕ್ಷಿತ ಹೆರಿಗೆಗೆ ಅನುಕೂಲವಾಗುತ್ತದೆ. ಉಚಿತವಾಗಿ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದರಿಂದ ತಾಯಿ ಮತ್ತು ಶಿಶುವಿನ ಮರಣದ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

40 ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ , ಸ್ತ್ರೀ ರೋಗ ತಜ್ಞ ಡಾ. ಲೋಕೇಶ್ ಗರ್ಭಿಣಿಯರು ಗರ್ಭ ಧರಿಸಿದ ದಿನದಿಂದ ಹೆರಿಗೆ ಆಗುವ ವರೆಗೆ ಎಚ್ಚರಿಕೆಯಿಂದ ಇರಬೇಕು. 3 ತಿಂಗಳ ನಂತರ ಹೆಚ್ಚು ಭಾರ ಎತ್ತಬಾರದು. ಜೋರಾಗಿ ಓಡಾಡ ಬಾರದು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ವೈದ್ಯರಲ್ಲಿ ಪರೀಕ್ಷಿಸಿ ,  ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ ರೇಖಾ, ಡಾ. ಸುಮಾ ಭಾಗವಹಿಸಿದ್ದರು. ಆರೋಗ್ಯ ಇಲಾಖೆಯ ಭಾನುಶ್ರೀ, ಮಂಜಮ್ಮ, ಜ್ಯೋತಿ, ಸುಜಾತ ಸಹಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.