
ಅರಕಲಗೂಡು: ತಾಲ್ಲೂಕಿನ ಕಣಿವೆ ಬಸವೇಶ್ವರ ಸ್ವಾಮಿ 65ನೇ ವರ್ಷದ ಜಾತ್ರಾ ಮಹೋತ್ಸವವನ್ನು ನ.12 ರಿಂದ 17ರವರೆಗೆ ಕಣಿವೆ ಬಸವೇಶ್ವರ ಸೇವಾ ಸಮಿತಿ ಆಯೋಜಿಸಿದೆ.
ಕಣಿವೆ ಬಸವೇಶ್ವರ ಸ್ವಾಮಿಯು ಜಾನುವಾರು ದೇವರು ಎಂದೇ ಖ್ಯಾತವಾಗಿದ್ದು ಜಾನುವಾರುಗಳಿಗೆ ರೋಗ ರುಜಿನಗಳು ಬರದಂತೆ, ಗಬ್ಬದ ಜಾನುವಾರುಗಳಿಗೆ ಸುಖ ಪ್ರಸವವಾಗುವಂತೆ ಕೋರಿ ರೈತರು ಹರಕೆ ಹೊರುವುದು ವಾಡಿಕೆಯಾಗಿದೆ. ಹಸು, ಎಮ್ಮೆ ಕರು ಹಾಕಿದರೆ ಮೊದಲ ಹಾಲಿನಲ್ಲಿ ಗಿಣ್ಣು ತಯಾರಿಸಿ ಕಣಿವೆ ಬಸಪ್ಪನಿಗೆ ರೊಟ್ಟಿ,ಗಿಣ್ಣು ಸಮರ್ಪಿಸಿದ ಬಳಿಕ ಮನೆ ಮತ್ತು ಮಾರಾಟಕ್ಕೆ ಬಳಸುವುದು ರೂಢಿ.
ರೈತರ ಕೃಷಿ ಚಟುವಟಿಕೆಗಳು ಮುಗಿದ ಬಳಿಕ ಈ ಭಾಗದಲ್ಲಿ ನಡೆಯುವ ಮೊದಲ ಜಾನುವಾರು ಜಾತ್ರೆ ಇದಾಗಿದೆ. ಪ್ರತಿ ವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ ಬಸವೇಶ್ವರನಿಗೆ ವಿಶೇಷ ಪೂಜೆ ನಡೆಸಿ ಜಾತ್ರೆ ನಡೆಸಲಾಗುವುದು. ಸುತ್ತಮುತ್ತಲ ಹತ್ತಾರು ಗ್ರಾಮಗಳಿಂದ ರೈತರು ಜಾನುವಾರುಗಳನ್ನು ತಂದು ಇಲ್ಲಿ ಮಾರಾಟಮಾಡುತ್ತಿದ್ದರು. ಆದರೆ ಇಂದು ಕೇವಲ ಜಾನುವಾರುಗಳ ಪ್ರದರ್ಶನಕಷ್ಟೆ ಜಾತ್ರೆ ಸೀಮಿತಗೊಂಡಿದೆ. ಕಣಿವೆ ಬಸಪ್ಪ ದೇವಾಲಯದಲ್ಲಿ ವಿಶೇಷ ಪೂಜಾಕಾರ್ಯಗಳು ಪ್ರಾರಂಭವಾಗಿದ್ದು ಜಾನುವಾರುಗಳನ್ನು ರೈತರು ಕರೆತರುತ್ತಿದ್ದಾರೆ.
ನ.14 ಶುಕ್ರವಾರ ಪಟ್ಟಣದಲ್ಲಿ ಜಾನುವಾರುಗಳ ಮೆರವಣಿಗೆ ಏರ್ಪಡಿಸಲಾಗಿದೆ. ನ.15 ಮತ್ತು 17 ರಂದು ಹಣ್ಣುಕಾಯಿ ಸಮರ್ಪಣೆ, ರುದ್ರಾಭಿಷೇಕ, ವಿಶೇಷ ಪೂಜಾ ಕಾರ್ಯಗಳು ನೆರವೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆಯನ್ನು ಆಯೋಜನೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.