ಹೊಳೆನರಸೀಪುರ: ತಾಲ್ಲೂಕಿನ ಶ್ರಾವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟಿಗನಹೊಸೂರು ಗ್ರಾಮದಲ್ಲಿ ಬುಧವಾರ ಜೇನು ಕಡಿದು ಯುವಕ ಮೃತಪಟ್ಟಿದ್ದಾರೆ.
ಗ್ರಾಮದ ರೈತ ದಿ.ನಟರಾಜ್, ಲೀಲಾವತಿ ದಂಪತಿ ಪುತ್ರ ಕೆ.ಎನ್.ಶಶಿಕುಮಾರ (32) ಮೃತ ಯುವಕ. ಬುಧವಾರ ಬೆಳಗ್ಗೆ ಕಬ್ಬೂರು ಗ್ರಾಮ ಸಮೀಪದ ತೋಟದಲ್ಲಿ ತೆಂಗಿನ ಮರದಿಂದ ಎಳನೀರು ಇಳಿಸುವ ಕೆಲಸಕ್ಕೆ ತೆರಳಿದ್ದಾಗ ತೆಂಗಿನ ಮರದಲ್ಲಿದ್ದ ಜೇನುಹುಳುಗಳ ದಾಳಿಯಿಂದ ತೀವ್ರ ಅಸ್ವಸ್ಥಗೊಂಡಿದ್ದರು. ದೊಡ್ಡಕಾಡನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತರಿಗೆ ತಾಯಿ, ಸಹೋದರ ಇದ್ದಾರೆ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸವಿತಾ, ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಹಾಗೂ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಮಾಹಿತಿ ಪಡೆದುಕೊಂಡರು.
‘ಕೂಲಿ ಮಾಡಿ ಜೀವನ ಮಾಡುತ್ತಿದ್ದ ಕುಟುಂಬಕ್ಕೆ ಈಗ ಆಧಾರವೇ ಇಲ್ಲದಂತಾಗಿದೆ. ಕೃಷಿ ಇಲಾಖೆ ವತಿಯಿಂದ ಮೃತನ ತಾಯಿಗೆ ಸೂಕ್ತ ಪರಿಹಾರ ನೀಡಿ ಅವರ ಜೀವನಕ್ಕೆ ಸಹಕಾರ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜವರೇಗೌಡ ಹಾಗೂ ಗ್ರಾಮಸ್ಥರು ತಹಶೀಲ್ದಾರ್ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.