ಹಾಸನ: ಬೆಳೆ ಹಾನಿ ಸಮೀಕ್ಷೆಯನ್ನು ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಕಾಫಿ ಮಂಡಳಿ ಪ್ರತ್ಯೇಕವಾಗಿ ನಡೆಸುವ ಬದಲು ಜಂಟಿಯಾಗಿ ನಡೆಸಬೇಕು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.
ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಹೇಮಾವತಿ ಜಲಾಶಯ ಅವಧಿಗೆ ಮುನ್ನ ಭರ್ತಿಯಾಗಿರುವುದು ಸಂತಸ. 6.50 ಲಕ್ಷ ಎಕರೆ ಲಕ್ಷ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ವಾಡಿಕೆಗಿಂತ 4 ಪಟ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ರಸ್ತೆಗಳು ಹಾನಿಯಾಗಿವೆ. ಹಾಗಾಗಿ ರಾಷ್ಟ್ರೀಯ ನೀತಿ ಎಂದು ಪರಿಗಣಿಸಿ, ತಾಲ್ಲೂಕುವಾರು ಬೆಳೆ ಪರಿಹಾರ ಹಾಗೂ ರಸ್ತೆ ಅಭಿವೃದ್ಧಿಗಾಗಿ ತಲಾ ₹100 ಕೋಟಿ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಹತ್ತು ಸಾವಿರ ಹೆಕ್ಟೇರ್ ಕಾಫಿ ಬೆಳೆ ನಾಶವಾಗಿದ್ದು, ಶೇಕಡಾ 60 ರಷ್ಟು ಕಾಫಿ ಪೂರ್ಣ ಉದುರಿದೆ. ಮೆಣಸು ಸಹ ನಷ್ಟವಾಗಿದೆ. ಮುಂದಿನ ಒಂದೂವರೆ ತಿಂಗಳು ಸಹ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆಲೂರು ತಾಲ್ಲೂಕಿನಲ್ಲಿ ಮುಸುಕಿನ ಜೋಳ ಸಂಪೂರ್ಣ ನಾಶವಾಗಿದೆ. ಎಕರೆಗೆ ₹ 24 ಸಾವಿರ ಖರ್ಚು ಮಾಡಲಾಗಿದೆ. ಎನ್ಡಿಆರ್ಎಫ್ ನಿಯಮ ಪ್ರಕಾರ ಬೆಳೆ ನಷ್ಟಕ್ಕೆ ಪರಿಹಾರ ನೀಡುವುದು ಅವೈಜ್ಞಾನಿಕ. ಅಧಿಕಾರಿಗಳು ತಮ್ಮ ಇಚ್ಚೆಯಂತೆ ಬರೆದುಕೊಂಡು ಬಂದು ವರದಿ ನೀಡಬಾರದು. ವೈಜ್ಞಾನಿಕ ರೀತಿಯಲ್ಲಿ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.
₹32 ಕೋಟಿ ವೆಚ್ಚದ 63 ಕಾಮಗಾರಿಗೆ ಮಂಜೂರಾತಿ ಕೇಳಲಾಗಿದ್ದು, ಎಲ್ಲವೂ ಟೆಂಡರ್ ಹಂತದಲ್ಲಿವೆ. ಸರ್ಕಾರ ಮಂಜೂರಾತಿ ನೀಡದಿದ್ದರೆ ಹೇಮಾವತಿ ಜಲಾಶಯ ಹಾಗೂ ಸಕಲೇಶಪುರದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.