
ಆನೆ ಭೀಮ
ಹಾಸನ: ‘ಜಿಲ್ಲೆಯ ಮಲೆನಾಡು ಭಾಗದ ಹಲವು ಗ್ರಾಮಗಳಲ್ಲಿ ಸಂಚರಿಸುತ್ತಿರುವ ಶಾಂತ ಸ್ವಭಾವದ ಕಾಡಾನೆ ‘ಭೀಮ’ನನ್ನು ನೋಡಲು ಜನ ಮುಗಿ ಬೀಳುತ್ತಿದ್ದು, ಅದರ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿರ್ಬಂಧಿಸಲಾಗುವುದು’ ಎಂದು ಡಿಎಫ್ ಒ ಸೌರಭ್ ಕುಮಾರ್ ತಿಳಿಸಿದರು.
ಈ ಕುರಿತು ಶನಿವಾರ ಮಾಹಿತಿ ನೀಡಿರುವ ಅವರು, ‘ಇಲಾಖೆಯ ಇಟಿಎಫ್ ದಿನದ 24 ಗಂಟೆಯೂ ಭೀಮನ ಚಲನವಲನವನ್ನು ಗಮನಿಸುತ್ತಿದೆ. ಅದು ಸಂಚರಿಸುವಾಗ ಚಿತ್ರೀಕರಿಸದಂತೆ ವಿನಂತಿ ಮಾಡಲಾಗಿದೆ ಹಾಗೂ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದರು.
‘ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳನ್ನು ರಕ್ಷಿಸಲು, ಜೀವವೈವಿಧ್ಯವನ್ನು ಸಂರಕ್ಷಿಸಲು ವನ್ಯಜೀವಿ (ರಕ್ಷಣೆ) ಕಾಯ್ದೆ, 1972 (ಡಬ್ಲ್ಯ ಪಿಎ) ಅನ್ನು ರೂಪಿಸಲಾಗಿದೆ. ಪ್ರಾಣಿಗಳಿಗೆ ತೊಂದರೆ ನೀಡುವುದು ಅಪರಾಧ’ ಎಂದರು.
‘ಸುರಕ್ಷತೆ ದೃಷ್ಟಿಯಿಂದ ಜನ ‘ಭೀಮ’ನ ಬಳಿಗೆ ಹೋಗಬಾರದು. ಕಾಡುಪ್ರಾಣಿ ಯಾವಾಗ, ಹೇಗೆ ವರ್ತಿಸುತ್ತದೆ ಎಂದು ಹೇಳಲಾಗದು. ಭೀಮನ ಸಮೀಪ ಹೋಗಿ ಫೋಟೊ, ವಿಡಿಯೊ ಚಿತ್ರೀಕರಿಸಿದರೆ, ಸೆಲ್ಫಿ ತೆಗೆದುಕೊಂಡರೆ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
‘ಇಟಿಎಫ್ ಸಿಬ್ಬಂದಿ ‘ಭೀಮ’ನನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.