ADVERTISEMENT

ಹಿಂದೂ–ಮುಸ್ಲಿಂ ಬಾಂಧವ್ಯ ಬೆಸೆದ ರಥೋತ್ಸವ

ಎಲ್ಲಾ ಧರ್ಮದ ದೇವರ ಭಾವಚಿತ್ರಗಳ ಮಾರಾಟ ಮಾಡುವ ತೌಫಿಕ್‌

ಕೆ.ಎಸ್.ಸುನಿಲ್
Published 14 ಏಪ್ರಿಲ್ 2022, 16:03 IST
Last Updated 14 ಏಪ್ರಿಲ್ 2022, 16:03 IST
ಬೇಲೂರು ಚನ್ನಕೇಶವ ಸ್ವಾಮಿ ಜಾತ್ರೆಯಲ್ಲಿ ಎಲ್ಲಾ ಧರ್ಮಗಳ ದೇವರ ಭಾವಚಿತ್ರ ಮಾರಾಟ ಮಾಡುತ್ತಿರುವ ಅರಸೀಕೆರೆಯ ತೌಫಿಕ್
ಬೇಲೂರು ಚನ್ನಕೇಶವ ಸ್ವಾಮಿ ಜಾತ್ರೆಯಲ್ಲಿ ಎಲ್ಲಾ ಧರ್ಮಗಳ ದೇವರ ಭಾವಚಿತ್ರ ಮಾರಾಟ ಮಾಡುತ್ತಿರುವ ಅರಸೀಕೆರೆಯ ತೌಫಿಕ್   

ಬೇಲೂರು: ಐತಿಹಾಸಿಕ ಚನ್ನಕೇಶವ ಸ್ವಾಮಿ ರಥೋತ್ಸವದ ಎರಡನೇ ದಿನವಾದಗುರುವಾರ ಎಲ್ಲ ಧರ್ಮದವರೂ ಅಂಗಡಿ ತೆರೆದು ವ್ಯಾಪಾರ ಮಾಡುವಮೂಲಕ ಭಾವೈಕ್ಯದ ಸಂದೇಶ ಸಾರಿದರು.

ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ವಿವಾದವೂ ಈ ಬಾರಿ ಎದ್ದಿತ್ತು. ಆದರೆ, ಜಿಲ್ಲಾಡಳಿತ ರಥೋತ್ಸವ ವೇಳೆ ಅಂಗಡಿ ಹಾಕುವುದಕ್ಕೆ ಮುಸ್ಲಿಮರಿಗೆಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಹಾಗಾಗಿ ಅರಸೀಕೆರೆ, ಬಾಳೆ ಹೊನ್ನೂರು,ಚಿಕ್ಕಮಗಳೂರು, ಹಳೇಬೀಡು, ಕಡೂರು ಭಾಗದ ಮುಸ್ಲಿಮರು ಹಾಗೂ ಸ್ಥಳೀಯರು ಅಂಗಡಿಗಳನ್ನು ತೆರೆದು, ಯಾವುದೇ ತಾರತಮ್ಯ ಇಲ್ಲದೇ ವ್ಯಾಪಾರ ನಡೆಸಿದರು.

ಎರಡು ದಶಕಗಳಿಂದ ಜಾತ್ರೆ ಸಂದರ್ಭದಲ್ಲಿ ಅಂಗಡಿ ಹಾಕುವಅರಸೀಕೆರೆಯ ತೌಫಿಕ್‌, ಎಲ್ಲಾ ಧರ್ಮಗಳ ದೇವರ ಭಾವಚಿತ್ರಗಳನ್ನು ಮಾರಾಟ ಮಾಡುವ ಮೂಲಕ ಕೋಮು ಸಾಮರಸ್ಯ ನೆನಪಿಸಿದರು. ಅದೇ ರೀತಿ ಬಾಳೆ ಹೊನ್ನೂರಿನ ಸೈಯದ್‌ ಬಾಷ ಅವರು ಆಟಿಕೆ ವಸ್ತು ಹಾಗೂ ನದೀಮ್ ಅವರು ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇವರಪಕ್ಕದಲ್ಲಿಯೇ ಸ್ಥಳೀಯರಾದ ತಿಲಕ್‌ ಸಿಹಿ ತಿನಿಸು ಅಂಗಡಿ ತೆರೆದಿದ್ದರು.

ADVERTISEMENT

ಪಟ್ಟಣದ ವಿವಿಧೆಡೆ ಮುಸ್ಲಿಂ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಭಕ್ತರಿಗೆ ಪಾನಕ, ಮಜ್ಜಿಗೆ, ಉಪಾಹಾರ ನೀಡಲಾಯಿತು.ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಚನ್ನಕೇಶವಸ್ವಾಮಿ ದರ್ಶನಕ್ಕೆ ಅನುವುಮಾಡಿಕೊಡಲಾಯಿತು. ಹರಕೆ ತೀರಿಸುವುದಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರು ಬಂದಿದ್ದರು.

‘ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಸಂದರ್ಭದ ಸರ್ವ ಧರ್ಮ ಪ್ರಾರ್ಥನೆ ಮಾಡಿ, ‘ದೇವರೆಲ್ಲ ಒಂದೇರೂಪ, ನಾಮ ಹಲವು, ಎಲ್ಲರಿಗೂ ಒಳ್ಳೆಯದು ಮಾಡಿ’ ಎಂದು ಕುರಾನ್ ಪಠಣಮಾಡಿದ್ದೇನೆ. ಸಂಪ್ರದಾಯದಂತೆ ರಥೋತ್ಸವ ಪ್ರಾರಂಭಕ್ಕೂ ಮುನ್ನ ಕುರಾನ್ ಪಠಣ ಮಾಡಿಕೊಂಡು ಬರುತ್ತಿದ್ದೇನೆ’ ಎಂದು ಮೌಲ್ವಿ ಸಯ್ಯದ್‌ಸಜ್ಜಾದ್‌ ಭಾಷಾ ಖಾದ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.