
ಚನ್ನರಾಯಪಟ್ಟಣದಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಜರುಗಿತು
ಚನ್ನರಾಯಟ್ಟಣ: ಪಟ್ಟಣದ ಕೋಟೆ ಪ್ರದೇಶದಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದಲ್ಲಿ ಬೆಳಿಗ್ಗೆ ದೇವರಿಗೆ ಸುಪ್ರಭಾತ ಸೇವೆ, ಅಭಿಷೇಕ, ಕೃಷ್ಣಗಂಧೋತ್ಸವದ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿದ ಬಳಿಕ ಅಲಂಕೃತ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆಮಾಡಿ ಬಾಳೆಮರ ಕಡಿದಬಳಿಕ ಮೇಘಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತಾದಿಗಳು ಘೋಷಣೆ ಮೊಳಗಿಸುತ್ತ ತೇರನ್ನು ಎಳೆದರು. ರಥ ಸಾಗುವ ದಾರಿಯಲ್ಲಿ ತಳಿರು, ತೋರಣ ಕಟ್ಟಿಸಿಂಗರಿಸಲಾಗಿತ್ತು. ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಇಟ್ಟು ರಥವನ್ನು ಬರಮಾಡಿಕೊಳ್ಳಲಾಯಿತು. ಭಾರತೀಶ್ ಜಾನಪದಕಲಾ ತಂಡದ ಕಲಾವಿದರು ಕೋಲಾಟ ಪ್ರದರ್ಶಿಸಿದರೆ, ಡಿ. ಕಾಳೇನಹಳ್ಳಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದವತಿಯಿಂದ ಸೋಮನ Àಕುಣಿತ ಏರ್ಪಡಿಸಲಾಗಿತ್ತು.
ಮಂಗಳವಾದ್ಯದ ನಾದದೊಂದಿಗೆ ರಥೋತ್ಸವ ಜರುಗಿತು. ಭಕ್ತಾಧಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ತಹಶೀಲ್ದಾರ್ ಜಿ.ಎಸ್. ಶಂಕರಪ್ಪ, ಜಿಲ್ಲಾಪಂಚಾಯಿತಿಮಾಜಿ ಸದಸ್ಯ ಕುಸುಮಾಬಾಲಕೃಷ್ಣ, ಪುರಸಭೆಯ ಮುಖ್ಯಾಧಿಕಾರಿ ಆರ್. ಯತೀಶ್ಕುಮಾರ್, ಟಿಎಪಿಸಿಎಂಎಸ್ ಅದ್ಯಕ್ಷ ಎಚ್.ಆರ್. ವೆಂಕಟೇಶ್, ನಿರ್ದೇಶಕ ರಮೇಶ್ಕುಂಬಾರಹಳ್ಳಿ, ತಾಲ್ಲೂಕು ಸರ್ಕಾರಿ ನೌಕರಿ ಸಂಘದ ಅದ್ಯಕ್ಷ ಎಂ.ಆರ್. ಮಂಜುನಾಥ್, ನವೋದಯ ವಿದ್ಯಾಸಂಘದ ಅಧ್ಯಕ್ಷ ಸಿ.ಜೆ. ಮಂಜುನಾಥ್, ಪುರಸಭೆಯಮಾಜಿ ಸದಸ್ಯರಾದ ಕೆ.ಎನ್. ಬನಶಂಕರಿ, ಸುಬ್ರಹ್ಮಣ್ಯ, ಸಿ.ಎನ್. ಮೋಹನ್, ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ಭಾಗವಹಿಸಿದ್ದರು.
ಅದೇ ದಿನ ಸಂಜೆ ಉಯ್ಯಾಲೋತ್ಸವ ಮತ್ತು ಭಜನ್ ತಂಡದ ಕಲಾವಿದರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಫೆ. ಒಂದರಿಂದ ಆರಂಭವಾಗಿದ್ದ ಇತಿಹಾಸ ಪ್ರಸಿದ್ದ ಚಂದ್ರಮೌಳೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ತೆರೆಬಿತ್ತು.
ಚನ್ನರಾಯಪಟ್ಟಣದ ಕೋಟೆ ಪ್ರದೇಶದಲ್ಲಿರುವ ಇತಿಹಾಸ ಪ್ರಸಿದ್ದ ಚಂದ್ರಮೌಳೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಪಾಲ್ಗೊಂಡಿದ್ದರು. ಮಂಗಳವಾರ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ರಥೋತ್ಸವದ ಮುಂದೆ ಕಲಾವಿದರು ಕೋಲಾಟ ಪ್ರದರ್ಶಿಸುತ್ತಿದ್ದರು. ಕೋಲಾಟದ ಕಲಾವಿದರೊಂದಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಮತ್ತು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯೆ ಕುಸುಮಾಬಾಲಕೃಷ್ಣ ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.