ಹಾಸನ: ಶಿವಶರಣ ಅಂಬಿಗರ ಚೌಡಯ್ಯ ಅವರು 12ನೇ ಶತಮಾನದಲ್ಲಿ ಮೌಢ್ಯದ ವಿರುದ್ಧ ಹೋರಾಡುವ ಮೂಲಕ ಸಾಮಾಜಿಕ ಕ್ರಾಂತಿಗೆ ಶ್ರಮಿಸಿದರು ಎಂದು ಉಪವಿಭಾಗಧಿಕಾರಿ ಬಿ.ಎ. ಜಗದೀಶ್ ಹೇಳಿದರು.
ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೇಷ್ಠ ವಚನಕಾರ ಚೌಡಯ್ಯ ಸಮಾಜದಲ್ಲಿ ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಿದರು. ಅವರ ವಚನಗಳಸಾರ ಅರಿತು ಅಸಮಾನತೆ ವಿರುದ್ಧ ಹೋರಾಡಬೇಕು. ಮಹನೀಯರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ಸಮಾಜದ ಪ್ರಮುಖರಾದ ಬಿ.ಟಿ. ಗೋಪಾಲಕೃಷ್ಣ ಮಾತನಾಡಿ, ಬಸವಣ್ಣನ ಸರಳತೆ ನೋಡಿ ಅವರೊಂದಿಗೆ ಸೇರಿ ಸಮಾಜದಲ್ಲಿ ಅಸಮಾನತೆ, ಶೋಷಣೆಗಳ ವಿರುದ್ಧ ಹೋರಾಟ ನಡೆಸಿದರು. ಚೌಡಯ್ಯ ಅವರು ಸುಮಾರು ಹತ್ತು ಸಾವಿರದಿಂದ 12 ಸಾವಿರ ವರೆಗೆ ವಚನ ರಚಿಸಿದ್ದಾರೆ. ಆದರೆ 337 ವಚನಗಳು ಮಾತ್ರ ಲಭ್ಯವಿವೆ ತಿಳಿಸಿದರು.
ಗಂಗಾಮತ ಸಮಾಜದ ಮುಖಂಡ ನಾಗರಾಜು ಮಾತನಾಡಿ, ಕೋವಿಡ್ ಹಿನ್ನಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್ , ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಸ್ವಾತಂತ್ರ ಹೋರಾಟಗಾರ ಎಚ್ .ಎಂ. ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.